ಬೆಂಗಳೂರು, ಡಿ. 8 : ಡಿ. 05 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಇದರ ಫಲಿತಾಂಶ ಸೋಮವಾರ ಹೊರ ಬೀಳಲಿದೆ. ಆಡಳಿತರೂಢ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ಪಾಲಿಗೆ ಇದು ಅತ್ಯಂತ ಮಹತ್ವದ ಚುನಾವಣೆ. ಫಲಿತಾಂಶ ನಮಗೆ ಸಾಧಕವಾಗಿ ಬರಲಿ ಎಂಬ ಕಾರಣಕ್ಕೆ ಮೂರೂ ಪಕ್ಷದ ನಾಯಕರು ಇದೀಗ ದೇವರ ಮೊರೆ ಹೋಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತಿಗೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಲಿ ಎಂದು ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡ ಸರತಿ ಆರಂಭವಾಗಿದೆ.
ಚುನಾವಣಾ ಫಲಿತಾಂಶ ಜೆಡಿಎಸ್ ಪಕ್ಷಕ್ಕೆ ಸಾಧಕವಾಗಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಶಿರಡಿ ಸಾಯಿಬಾಬಾ ದರ್ಶನಕ್ಕೆ ಮುಂದಾಗಿದ್ದಾರೆ. ಇಂದು ಸಂಜೆ ಸಾಯಿಬಾಬಾ ದರ್ಶನ ಪಡೆಯಲು ಇಂದು ಮಧ್ಯಾಹ್ನ ರಾಜಧಾನಿಯಿಂದ ವಿಮಾನ ಮಾರ್ಗವಾಗಿ ಪುಣೆ ತಲುಪಲಿದ್ದಾರೆ. ಸಂಜೆ 4.30ಕ್ಕೆ ಸಾಯಿಬಾಬಾ ದರ್ಶನ ಪಡೆಯಲಿರುವ ದೇವೇಗೌಡ, 6.30ಕ್ಕೆ ಶನಿ ಸಿಗ್ನಾಪುರದಲ್ಲಿ ಶನಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.