ಕಲಬುರಗಿ: ಕಲಬುರಗಿಯಲ್ಲಿ ಅಕ್ಕಿ ಸೇರಿದಂತೆ ಹಾಲಿನಪುಡಿಯ ಕಳ್ಳರ ದುಕಾನ್ ಬಂದ್ ಆಗಿವೆ. ಈಗ ಉಮೇಶ್ ಜಾಧವನ ದುಕಾನ್ ಮಾತ್ರ ಓಪನ್ ಇದೆ. ಅದನ್ನೂ ಕೂಡಾ ನೀವೆ ಬಂದ್ ಮಾಡಲಿದ್ದೀರಿ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ಇಂಗಳಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿಸುತ್ತೇನೆ ಎನ್ನುತ್ತಿರುವ ಜಾಧವ್ ಚಿತ್ತಾಪುರದ ಅಪರಂಜಿ ಕಾಣೆಯಾಗಿದ್ದಾನೆ. ಜಾಧವನ ದುಕಾನ್ ಬಂದ್ ಮಾಡಲು 7 ನೇ ತಾರೀಖು ನೀವೇ ನಿರ್ಧರಿಸಲಿದ್ದೀರಿ. ಬಿಜೆಪಿಗೆ ಯಾವುದೇ ಬದ್ಧತೆ ಇಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಬಂದ್ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಗ್ಯಾರಂಟಿಗಳು ಬಂದ್ ಮಾಡಿಸಬೇಕಾ? ಎಂದರು.
ಗ್ಯಾರಂಟಿ ಯೋಜನೆಗಳ ಹಣ ಸದ್ಭಳಕೆಯಾಗುತ್ತಿದೆ ಎಂದ ಸಚಿವರು ರಾಜ್ಯದ ಜನಸಂಖ್ಯೆಯಲ್ಲಿ 4.60 ಕೋಟಿ ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಎಲ್ಲರೂ ಕಾಂಗ್ರೆಸ್ ಗೆ ಮಾತ್ರ ಓಟು ಹಾಕಿದ್ದಾರ? ಯಾವುದೇ ಪಕ್ಷದವರಿಗೆ ಓಟು ಹಾಕಿದ್ದೀರಿ ಎಂದು ಕೇಳಿದ್ದೇವಾ? ಇಲ್ಲಾ ತಾನೆ? ಎಂದರು.
ಮೋದಿಗೆ ರೈತರ, ಬಡವರ ದೀನ ದಲಿತರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬಂದಾಗ ಮತ್ತೆ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ ಎಂದು ಸಚಿವರು ಹೇಳಿದರು.