ಬೆಂಗಳೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರ ಪಥನಗೊಂಡು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿಯೇ ಮೈತ್ರಿ ಸರ್ಕಾರ ಪತನದ ಹಿಂದಿರ ರಹಸ್ಯವನ್ನು ಸಚಿವ ಎಸ್ ಟಿ ಸೋಮಶೇಖರ್ ಬಿಚ್ಚಿಟ್ಟಿದ್ದಾರೆ. ಸರಣಿ ರಾಜೀನಾಮೆಯ ಹಿಂದಿನ ರಹಸ್ಯವೇನು ಎಂಬುದನ್ನು ಗುಟ್ಟು ರಟ್ಟು ಮಾಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಮೈತ್ರಿ ಸರ್ಕಾರ ಪತನವಾಗಿದ್ದರಿಂದಲೇ ನಾವು ಸಚಿವರಾಗುವಂತಾಗಿದ್ದು. ಮೈತ್ರಿ ಪತನಕ್ಕೆ ಮುಖ್ಯ ಕಾರಣವೇ ಆನಂದ್ ಸಿಂಗ್. ರಾಜೀನಾಮೆ ಕೊಡ್ತೀವಿ ಕೊಡ್ತೀವಿ ಅಂತ ಎಲ್ಲರೂ ಹೇಳುತ್ತಿದ್ದರೇ ವಿನಹ, ನೀಡಿರಲಿಲ್ಲ. ಆದರೆ ಮೊದಲು ಆನಂದ್ ಸಿಂಗ್ ರಾಜೀನಾಮೆ ನೀಡಿದರು. ಹೀಗಾಗಿ ಮೈತ್ರಿ ಸರ್ಕಾರ ಪತನಕ್ಕೆ ನಾಂದಿಯಾಯಿತು ಎಂದರು.
ಸಚಿವ ಆನಂದ್ ಸಿಂಗ್ ರಾಜೀನಾಮೆ ನಂತರ ಸರಣಿಯಾಗಿ ಒಬ್ಬರಾದ ನಂತರ ಒಬ್ಬರು ಶಾಸಕರು ರಾಜೀನಾಮೆ ನೀಡಿದರು ಆನಂದ್ ಸಿಂಗ್ ಧೈರ್ಯ ಮಾಡಿ ರಾಜೀನಾಮೆ ಕೊಡದೇ ಇದ್ದರೇ ನಾವು ಕೊಡೋಕೆ ಮುಂದೆ ಬರೋದು ಕಷ್ಟ ಆಗುತ್ತಿತ್ತು. ರಾಜೀನಾಮೆಗೆ ಆನಂದ್ ಸಿಂಗ್ ತಳಪಾಯ ಹಾಕಿದರು. ಆನಂತರ ನಾವೆಲ್ಲಾ ರಾಜೀನಾಮೆ ಕೊಟ್ಟೆವು. ಮೈತ್ರಿ ಸರ್ಕಾರ ಪತನಗೊಂಡು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು, ನಾವು ಸಚಿವರಾಗುವಂತಾಯಿತು ಎಂಬುದಾಗಿ ಗುಟ್ಟು ಬಿಚ್ಚಿಟ್ಟಿದ್ದಾರೆ.