ಬೆಂಗಳೂರು, ಮಾರ್ಚ್ 4, ನ್ಯೂಸ್ ಎಕ್ಸ್ ಪ್ರೆಸ್: ಜೇನು ಓಡಿಸಲು ಹೋಗಿ 32ನೇ ಮಹಡಿಯಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಘಟನೆ ಅಮೃತ್ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವೀರಣ್ಣಪಾಳ್ಯ ನಿವಾಸಿ ವಾಸುದಾಸ್ (21) ಮೃತ ಕಾರ್ಮಿಕ. ಈ ಕುರಿತು ಗೌರಿ ಕನ್ಸ್ಟ್ರಕ್ಷನ್ ಉಸ್ತುವಾರಿ ಸುನಿಲ್ , ಮೇಲ್ವಿಚಾರಕ ಕುಮಾರ್, ಗುತ್ತಿಗೆದಾರ ಗುರುದೇವ್ ಗೋಪಾ ಹಾಗೂ ದಿನೇಶ್ ಎಂಬುವರ ವಿರುದ್ಧ ನಿರ್ಲಕ್ಷ್ಯ ಪ್ರಕರಣದಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಹೆಬ್ಬಾಳ ಹೊರವರ್ತುಲ ರಸ್ತೆಯ ವೀರಣ್ಣ ಪಾಳ್ಯದ ಕ್ಲಾರಾಮೌಂಟ್ನ 40ನೇ ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕೆಲಸಗಳು ನಡೆಯುತ್ತಿವೆ. ಈ ಕಟ್ಟಡದಲ್ಲಿ ವಾಸುದೇವ್ ಸೇರಿದಂತೆ ಇನ್ನೂ ಮೂರ್ನಾಲ್ಕು ಮಂದಿ ಕೆಲಸ ಮಾಡುತ್ತಿದ್ದರು.
ಕಾರ್ಮಿಕರು 40ನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೇನು ಹುಳುಗಳು ತೊಂದರೆ ನೀಡುತ್ತಿದ್ದವು. 32ನೇ ಮಹಡಿಯಲ್ಲಿ ಕಟ್ಟಿದ್ದ ಜೇನುಹುಳುಗಳನ್ನು ಸಂಜೆ ಬಳಿಕ ಅಲ್ಲಿಂದ ಓಡಿಸಬೇಕು ಎಂದು ಹೇಳಿದ್ದರು.
ಜೇನುಹುಳು ಓಡಿಸಲು ಸಿಬ್ಬಂದಿಗೆ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.