ಕಾರವಾರ, ಜೂ. 28 : ಇಲ್ಲಿನ ತಹಸೀಲ್ದಾರ್ ಕಚೇರಿ ಸೋರುತ್ತಿದ್ದು, ಒಳಗೆ ನೀರಿನ ಹೊಳೆ ಕಾಣುತ್ತಿದೆ. ಕಚೇರಿಯ ಮೊದಲ ಮಹಡಿ ಮೇಲ್ಛಾವಣಿ ಪಕ್ಕದಲ್ಲಿ ನೇರವಾಗಿ ನೀರು ಇಳಿಯುತ್ತಿದೆ. ಕಡತಗಳಿಗೂ ತೊಂದರೆ ಉಂಟಾಗಿದೆ.ಶಿಕ್ಷಣ ಇಲಾಖೆಗೆ ಸೇರಿದ ಹಳೆಯ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ ನಡೆಯುತ್ತಿದೆ. ಬೇರೆ ಇಲಾಖೆಗಳ ಕಟ್ಟಡದಲ್ಲೇ ನಡೆಯುತ್ತಿರುವ ತಹಸೀಲ್ದಾರ್ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ಸ್ವಂತ ಕಟ್ಟಡದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಪಕ್ಕದ ಕರೂರು ಮೈದಾನದಲ್ಲಿ ನೂತನ ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲ್ಲಿದೆ. ಕೆಎಚ್ಬಿ ಕಾಮಗಾರಿಯ ಟೆಂಡರ್ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದೆ ವರ್ಷಾಂತ್ಯದಲ್ಲಿ ನೂತನ ಕಟ್ಟಡ ಲಭ್ಯವಾಗುವ ಸಾಧ್ಯತೆ ಇದೆ.
ಭಾರಿ ಮಳೆ ಸುರಿದಿದ್ದರಿಂದ ಕಟ್ಟಡದಿಂದ ನೀರು ಸೋರುತ್ತಿರುವುದು ಗಮನಕ್ಕೆ ಬಂದಿದೆ. ಮಳೆಯ ಸುರಿಯುತ್ತಿದ್ದಾಗ ಮೇಲೆ ಹತ್ತಿ ರಿಪೇರಿ ಮಡಲು ಸಾಧ್ಯವಿಲ್ಲ. ಒಂದು ದಿನ ಮಳೆ ಬಿಡುವು ನೀಡಿದರೆ ರಿಪೇರಿ ಮಾಡುತ್ತೇವೆ ಎಂದು ರಾಮಚಂದ್ರ ಕಟ್ಟಿಮನಿ ತಹಸೀಲ್ದಾರ್ ಹೇಳಿದ್ದಾರೆ.