ಬೆಂಗಳೂರು, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಹಾವಿನ ಧ್ವೇಷ 12 ವರುಷ ಅಂತಾರೆ. ಆದ್ರೆ ಮನುಷ್ಯನ ಹಗೆ ನೂರು ವರುಷವಂತೆ.. ಕೊನೆಗೂ ಸಿದ್ದರಾಮಯ್ಯ ತಮ್ಮ ಹಳೆಯ ಧ್ವೇಷವನ್ನು ತೀರಿಸಿಕೊಂಡಿದ್ದಾರೆ. ಇತ್ತೀಚೆಗೆ ದೇವೇಗೌಡರು ನನ್ನನ್ನು ಜೆಡಿಎಸ್ನಿಂದ ಹೊರಹಾಕಿಲ್ಲ ಎಂಬ ಮಾತನ್ನು ಆಡಿದ್ರು.ಆದ್ರೆ ತಮ್ಮನ್ನು ಜೆಡಿಎಸ್ನಿಂದ ಹೊರಹಾಕಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸುವ ಮೂಲಕ ಸೇಡನ್ನು ತೀರಿಸಿಕೊಂಡಿದ್ದಾರೆ.
‘ರೇವಣ್ಣ’ ದೋಸ್ತಿ ವರ್ಕೌಟ್..!
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬಕ್ಕೆ ಹಾಸನ, ಮಂಡ್ಯ ಪ್ರಭಲ ಕ್ಷೇತ್ರಗಳು. ಹಾಸನದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವಿನ ಸಂಬಂಧ ಅತ್ಯಂತ ಆತ್ಮೀಯವಾಗಿದ್ದು, ಆ ಕಾರಣಕ್ಕಾಗಿಯೇ ಖುದ್ದಾಗಿ ಹಾಸನದಲ್ಲಿ ಪ್ರಚಾರ ಮಾಡಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದ್ದರು.
ಮೈತ್ರಿಗೆ ಸೆಡ್ಡು ಹೊಡೆದ ನಾಯಕರು!
ತುಮಕೂರು ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಕಾಟಾಚಾರ ಪ್ರಚಾರ ಮಾಡಿದ್ರು. ಮಂಡ್ಯದಲ್ಲಂತೂ ಸಿದ್ದರಾಮಯ್ಯನವರ ಬೆಂಬಲಿಗರೆಲ್ಲ ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡಿ ಮೈತ್ರಿಗೆ ಸೆಡ್ಡು ಹೊಡೆದರು. ತಮ್ಮ ಕಣ್ಣೆದುರಿಗೇ ಎಲ್ಲವೂ ನಡೆಯುತ್ತಿದ್ದರೂ ಸಿದ್ದರಾಮಯ್ಯ ಯಾವುದನ್ನೂಕಂಟಲ್ ಮಾಡೋದಕ್ಕೆ ಹೋಗ್ಲಿಲ್ಲ. ಹೀಗಾಗಿ ನಿಖಿಲ್ ಹೀನಾಯ ಸೋಲು ಕಾಣಬೇಕಾಯ್ತು.
ದೇವೇಗೌಡರ ಸೋಲಿಗೆ ‘ಸಿದ್ದು’ ಕಾರಣ?
ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಸಿದ್ದರಾಮಯ್ಯನವರ ಬೆಂಬಲಿಗರೇ ಕಾರಣ ಎನ್ನಲಾಗ್ತಿದೆ. ಮಧುಗಿರಿಯ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಪ್ರಭಾವಿ ನಾಯಕರುಗಳು ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಕೆಲಸ ಮಾಡಿಸಿದ್ದರು ಎಂಬ ಆರೋಪವಿದೆ. ದೇವೇಗೌಡರನ್ನು ಗೆಲ್ಲಿಸಿಕೊಳ್ಳಲು ಪರಮೇಶ್ವರ್ ಟೊಂಕಕಟ್ಟಿ ನಿಂತಿದ್ದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಕೊನೆಗೂ ಗೆದ್ದ ಸಿದ್ದರಾಮಯ್ಯ..!
ಒಂದೆಡೆ ತಮ್ಮ ರಾಜಕೀಯ ವಿರೋಧಿಯಾದ ದೇವೇಗೌಡರನ್ನು ಸೋಲಿಸುವುದು, ಮತ್ತೊಂದು ಕಡೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಮುಖಭಂಗ ಉಂಟುಮಾಡಿ ಕಾಂಗ್ರೆಸ್ನಲ್ಲಿ ತಾವೇ ಅದ್ವಿತೀಯ ನಾಯಕರು ಅನ್ನೋದನ್ನು ಸಾಭೀತು ಮಾಡಿದ್ದಾರೆ. ತಮ್ಮ ಆಪ್ತರಾಗಿದ್ದ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಹೋಗಲು ಬಿಟ್ಟು ಖರ್ಗೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿದ್ದರಾಮಯ್ಯ ಮನೆಗೆ ಕಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.