ಶಿವಮೊಗ್ಗ, ಅ. 13 : ದೇಹದಲ್ಲಿ ರಕ್ತದ ಪ್ರಮಾಣ ನಿಗದಿಗಿಂತ ಕಡಿಮೆ.ಪ್ರಾಣಕ್ಕೆ ಅಪಾಯ.ಆ 7 ವರ್ಷದ ಬಾಲಕಿ ದೇಹದೊಳಗೆ ರಕ್ತವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೌದು… 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ, ತಿಂಡಿ ಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡು ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ. ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿದೇವಿ ದಂಪತಿ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ರಕ್ತ ಹೀನತೆಯಿಂದ ಬಳಲುತ್ತಿರುವ ಮಗಳ ಸಂಕಟ ನೋಡಲಾಗದೇ ಆಕೆಗೆ ಚಿಕಿತ್ಸೆ ಕೊಡಿಸಲು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದರೂ ಗುಣಮುಖಳಾಗಿಲ್ಲ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಮಾಡಿದರೆ ಗುಣಮುಖಳಾಗಬಹುದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಛವಾಗುತ್ತದೆ ಎಂದಿದ್ದಾರೆ. ಆದರೆ, ಅಷ್ಟೊಂದು ಹಣ ಎಲ್ಲಿಂದ ತರುವುದು ಎಂದು ಪೋಷಕರು ಕಂಗಾಲಾಗಿದ್ದಾರೆ.