ರೌಡಿ ಇಡ್ಲಿದಾಸ ಅಲಿಯಾಸ್ ಗಂಗಾಧರ್ ಹತ್ಯೆ

ರೌಡಿ ಇಡ್ಲಿದಾಸ ಅಲಿಯಾಸ್ ಗಂಗಾಧರ್ ಹತ್ಯೆ

ದೊಡ್ಡಬಳ್ಳಾಪುರದ ಕೊರಮರ ಪೇಟೆಯ ನಟೋರಿಯಸ್ ಹುಡುಗರು ನಡೆಸಿದ ಹಲ್ಲೆಯಲ್ಲಿ ಇಡ್ಲಿದಾಸ ಹತನಾಗಿದ್ದಾನೆ. ದೊಡ್ಡಬಳ್ಳಾಪುರದ ಕುಚ್ಚಪ್ಪಪೇಟೆಯ ನಿವಾಸಿಯಾಗಿದ್ದ ಗಂಗಧಾರ್ ಅಲಿಯಾಸ್ ಇಡ್ಲಿದಾಸ ಹತ್ಯೆಯಾದ ರೌಡಿ. ನಿನ್ನೆ ರಾತ್ರಿ 10-30ರ ಸಮಯದಲ್ಲಿ ಇಡ್ಲಿದಾಸ ನಗರದ ಕೊರಚರಹಟ್ಟಿಯ ಪ್ರೀತಿ ವೈನ್ಸ್ ಬಳಿ ಸ್ನೇಹಿತ ಬೆಂಕಿ ಅಲಿಯಾಸ್ ಪವನ್ ಜೊತೆ ನಿಂತಿದ್ದ. ಇದೇ ವೇಳೆ ಅಲ್ಲಿಗೆ ಬಂದ ಕಬಾಬ್ ಆನಂದ್, ಕಬಾಬ್ ಲೋಕಿ ಮತ್ತು ಮುನಿಸ್ವಾಮಿ, ಇಡ್ಲಿದಾಸನ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.

ಇಡ್ಲಿದಾಸನ ಮೇಲೆ ಹಲ್ಲೆ ಮಾಡುವ ವೇಳೆ ಸ್ಥಳದಲ್ಲಿದ್ದ ಬೆಂಕಿ ಅಲಿಯಾಸ್ ಪವನ್​ಗೆ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಕಬಾಬ್ ಸಹೋದರಿಂದ ತಪ್ಪಿಸಿಕೊಂಡು ಇಡ್ಲಿದಾಸನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾನೆ. ಮನೆಯವರು ಬಂದು ನೋಡುವ ಮೊದಲೇ ಇಡ್ಲಿದಾಸನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹಲ್ಲೆಗೊಳಗಾದ ಬೆಂಕಿಯನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಡ್ಲಿದಾಸನ ಕೊಲೆಗೈದ ಕಬಾಬ್ ಆನಂದ್, ಕಬಾಬ್ ಲೋಕಿ ಮತ್ತು ಮುನಿಸ್ವಾಮಿ ಘಟನೆಯ ನಂತರ ಪೊಲೀಸರಿಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರು ಈ ಇಡ್ಲಿದಾಸ?

ನಗರದ ಕುಚ್ಚಪ್ಪನಪೇಟೆಯ ನಾಗರಾಜ್ ಮತ್ತು ವೇದಾವತಿಯ ಎರಡನೇ ಮಗ ಗಂಗಧಾರ್. ನಗರದ ಬಸ್ ನಿಲ್ದಾಣದಲ್ಲಿ ಇಡ್ಲಿ ಅಂಗಡಿಯನ್ನು ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಇಡ್ಲಿದಾಸ ಅಂತಾನೇ ಹುಡುಗರು ಕರೆಯುತ್ತಿದ್ರು.

ಕಾಲೇಜ್​ನಲ್ಲಿ ಓದುತ್ತಿದಾಗಲೇ ಗ್ಯಾಂಗ್ ಲೀಡರ್ ಆಗಿ ಗುರುತಿಸಿಕೊಂಡಿದ್ದ ಈತ ಹುಡುಗರ ಸಣ್ಣದೊಂದು ಗ್ಯಾಂಗ್ ಕಟ್ಕೊಂಡು ರೋಲ್​ಕಾಲ್, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಕ್ರಮೇಣ ಪಾತಕ ಲೋಕದ ನಂಟು ಅಂಟಿಸಿಕೊಂಡು ಹಲವು ಕೊಲೆ ಯತ್ನ ಪ್ರಕರಣಗಳಲ್ಲಿ ಇಡ್ಲಿದಾಸನ ಹೆಸರು ಕೇಳಿಬಂದಿದೆ.

ಅನೈತಿಕ ಸಂಬಂಧ ಕೊಲೆಗೆ ಕಾರಣ:

ಇಡ್ಲಿದಾಸನ ಕೊಲೆಗೆ ಕಾರಣವಾಗಿದ್ದು ಮಹಿಳೆಯೊಬ್ಬಳ ನಂಟು ಎನ್ನಲಾಗುತ್ತಿದೆ. ಕಬಾಬ್ ಆನಂದ್ ತಂಗಿಯ ಜೊತೆ ಇಡ್ಲಿದಾಸನಿಗೆ ಸ್ನೇಹವಿತ್ತು. ಇಡ್ಲಿದಾಸ ಆನಂದ್​ ತಂಗಿಯನ್ನು ಪ್ರೀತಿಸುತ್ತಿದ್ದನಂತೆ. ಅದರೆ ಕಬಾಬ್ ಆನಂದ್ ತಂಗಿ ಬೇರೆಯವನ ಜೊತೆ ಮದುವೆಯಾಗಿದ್ದಳು. ಮದುವೆಯಾದ್ರೂ ಅವಳ ಹಿಂದೆ ಬಿದ್ದಿದ್ದನಂತೆ ಇಡ್ಲಿದಾಸ. ಅವಳು ತವರಿಗೆ ಬಂದಾಗ ಅವಳನ್ನು ಕಾಡಿಸುತ್ತಿದ್ದನಂತೆ. ತಂಗಿಗೆ ಕಾಟ ಕೊಡುತ್ತಿದ್ದ ವಿಷಯ ಸಹೋದರರ ಕಿವಿಗೆ ಬಿದ್ದಿದ್ದು, ತಕ್ಷಣವೇ ಇಡ್ಲಿದಾಸನ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ.

ಮುಂಬೈ ಡಾನ್ ಬಾಂಬೆ ಸಲೀಮ್ ನಂಟು:

ನಟೋರಿಯಸ್ ಹಂತಕ ಬಾಂಬೆ ಸಲೀಮ್ ನಂಟು ಇಡ್ಲಿದಾಸನಿಗೆ ಇತ್ತು. ಆತನ ಹೆಸರು ಹೇಳಿಕೊಂಡು ದೊಡ್ಡಬಳ್ಳಾಪುರದಲ್ಲಿ ಬೆದರಿಕೆ ಹಾಕಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ಬಾಂಬೆ ಸಲೀಮ್​ಗೆ ಮುಂಬೈ ಪಾತಕ ಲೋಕದ ನಂಟಿದ್ದು, 7 ಕೊಲೆ ಪ್ರಕರಣಗಳಲ್ಲಿ ಆತನ ಹೆಸರಿದೆ ಎಂದು ತಿಳಿದು ಬಂದಿದೆ.

ಇತ್ತಿಚೇಗೆ ದೊಡ್ಡಬಳ್ಳಾಪುರ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪುಂಡ ಪೋಕರಿಗಳ ಗ್ಯಾಂಗ್ ಹಾವಳಿ ಜೋರಾಗಿದೆ. ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸರು ಮಾತ್ರ ಕೈ ಚೆಲ್ಲಿ ಕುಳಿತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನ ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಇನ್ನು ನಗರದಲ್ಲಿ ಪುಂಡ ಪೋಕರಿಗಳ ಗ್ಯಾಂಗ್​ಗಳು ಹೆಚ್ಚುತ್ತಲೇ ಇವೆ. ಪೊಲೀಸರು ಈಗಲಾದ್ರು ಎಚ್ಚೆತ್ತು ಪುಡಾರಿಗಳಿಗೆ ಬ್ರೇಕ್ ಹಾಕಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos