ಪೀಣ್ಯ ದಾಸರಹಳ್ಳಿ, ಆ. 30: ಬಾಗಲಗುಂಟೆ ವಾರ್ಡ್ 14ರ ವ್ಯಾಪ್ತಿಯಲ್ಲಿ ಬರುವ ಪೈಪ್ಲೈನ್ ರಸ್ತೆ( ಮಲ್ಲಸಂದ್ರ ಸರ್ಕಾರಿ ಆಸ್ಪತ್ರೆ ಮುಂಭಾಗದಿಂದ ಇಂದಿರಾ ಕ್ಯಾಂಟೀನ್ ವರೆಗೂ) ಡಾಂಬರು ಕಂಡಿಲ್ಲ. ದಿನನಿತ್ಯ ಜನರು ಎದ್ದು ನಿಂತಿರುವ ಜಲ್ಲಿಕಲ್ಲಿನ ಮೇಲೆ ಸರ್ಕಸ್ ಮಾಡುತ್ತಾ ಓಡಾಡಬೇಕಾಗಿದೆ. ಈ ರಸ್ತೆ ಬದಿಯಲ್ಲಿ ನೂರಾರು ಬಡ ಕುಟುಂಬದವರು ವಾಸಿಸುತ್ತಿದ್ದು, ನೂರಾರು ವಾಹನಗಳ ಸಂಚಾರದಿಂದ ದೂಳು ಹಾರುತ್ತಿದೆ. ಇನ್ನು ಮಳೆ ಬಂದರಂತೂ ಕೆಸರೊಡನೆ ಚೆಲ್ಲಾಟವಾಡುವ ಅನಿವಾರ್ಯತೆಯ ದುಸ್ಥಿತಿ ಎದುರಾಗುತ್ತದೆ.
ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆಗಳ ಮಳೆ ಸುರಿಸುವ ಜನಪ್ರತಿನಿಧಿಗಳು ಗೆದ್ದ ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದ ಪಾಲಿಕೆ ಸದಸ್ಯರ ಬಳಿ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಕೆಸರು ಹೆಚ್ಚಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.