ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ರಂಗೇರಿದ್ದು ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳನ್ನು ಗೆಲ್ಲಲು ಎಲ್ಲಾ ಪಕ್ಷಗಳು ಪಣತೊಟ್ಟಿದ್ದಾರೆ. ಅದರಂತೆ ಕಾಂಗ್ರೆಸ್ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗ್ತಿದೆ. ಅದ್ರಲ್ಲೂ ಬಹುತೇಕ ಕ್ಷೇತ್ರಗಳಲ್ಲಿ ಹೊಸ ಹಾಗೂ ಯುವ ಮುಖಗಳಿಗೆ ಮಣೆಹಾಕಿದೆ. ರಾಜಕೀಯ ಹಿನ್ನೆಲೆ ಇರುವ ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ.
ತೀವ್ರ ಹಗ್ಗಜಗ್ಗಾಟನದ ನಡುವೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ. ಚಿಕ್ಕಬಳ್ಳಾಪುರ ಟಿಕೆಟ್ ವಿಚಾರವು ರಾಜ್ಯ ಕಾಂಗ್ರೆಸ್ ನಾಯಕರಷ್ಟೇ ಅಲ್ಲ ಹೈಕಮಾಂಡ್ ನಾಯಕರಿಗೂ ಕಗ್ಗಂಟಾಗಿತ್ತು.
ಮಾಜಿ ಸಂಸದ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಪ್ರಮುಖ ನಾಯಕ ಎನಿಸಿದ್ದ ಎಂ.ವೀರಪ್ಪ ಮೊಯಿಲಿ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತು ರಕ್ಷಾ ರಾಮಯ್ಯ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಕೊನೆಗೂ ರಕ್ಷಾ ರಾಮಯ್ಯ ಅವರ ಪರವಾಗಿ ವರಿಷ್ಠರು ಒಲವು ತೋರಿದ್ದಾರೆ.
ಜಾತಿ, ಪ್ರಭಾವ, ಸಂಪರ್ಕ, ಯುವಮುಖ, ಸಮೀಕ್ಷೆ, ರಾಜ್ಯ ನಾಯಕರ ಬೆಂಬಲ ಈ ಎಲ್ಲವನ್ನೂ ಅಳೆದು ತೂಗಿ ವರಿಷ್ಠರು ರಕ್ಷಾ ರಾಮಯ್ಯ ಅವರನ್ನು ಅಭ್ಯರ್ಥಿಯನ್ನಾಗಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಾ ರಾಮಯ್ಯ, ವಿಧಾನ ಪರಿಷತ್ ಸದಸ್ಯರೂ ಆಗಿರುವ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರ ಪುತ್ರ.