ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪುವ ಅತಂಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹಿನಕಲ್ ಫ್ಲೈಓವರ್ ಸಮೀಪ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಹಾಗೂ ಬೆಂಬಲಿಗರು, ಪೋಸ್ಟರ್ ಹಿಡಿದು ಪ್ರತಾಪ ಸಿಂಹ ಪರ ಬ್ಯಾಟಿಂಗ್ ಮಾಡಿದರು. ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ? ಕಾಂಗ್ರೆಸ್ಸಿಗೆ ಟಕ್ಕರ್ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಎಂಬಿತ್ಯಾದಿ ಪೋಸ್ಟರ್ಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇಕೆ ಬೇಕು ಪ್ರತಾಪ್ ಸಿಂಹ ಬೇಕು, ದೇಶಕ್ಕಾಗಿ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ ಎಂದು ಘೋಷಣೆ ಕೂಗುತ್ತಾ, ಪ್ರತಾಪ್ ಸಿಂಹ ಬೆಂಬಲಿಸಿ ನೂರಾರು ಯುವಕರು ಪ್ರತಾಪ್ ಸಿಂಹ ಭಾವಚಿತ್ರ ಹಿಡಿದು ಬೈಕ್ ರ್ಯಾಲಿ ಸಹ ನಡೆಸಿದರು.