ಬೆಂಗಳೂರು, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ತಾತ ದೇವೇಗೌಡರು ಮೊಮ್ಮಗ ಪ್ರಜ್ವಲ್ಗಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ತುಮಕೂರು ಜನತೆ ದೇವೇಗೌಡರಿಗೆ ಕೈ ಹಿಡಿಯಲಿಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಮಂಡ್ಯದಲ್ಲೂ ಜೆಡಿಎಸ್ ಪ್ರತಿಷ್ಠೆ ಮಣ್ಣುಪಾಲಾಗಿದೆ. ಹೀಗಾಗಿ ತಾವು ಗೆದ್ದರೂ ಸಂಭ್ರಮಿಸಲಾಗದ ಸ್ಥಿತಿ ಪ್ರಜ್ವಲ್ ರೇವಣ್ಣ ಅವರದ್ದಾಗಿದೆ. ಇವೆಲ್ಲಾ ಕಾರಣಕ್ಕಾಗಿ ಗೆದ್ದು 24 ಗಂಟೆ ಕಳೆಯೋದರ ಒಳಗೆ ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ.
ಮಾಧ್ಯಮದವರ ಮುಂದೆ ಪ್ರಜ್ವಲ್ ಹೇಳಿದ್ದೇನು?
ದಿಢೀರ್ ಮಾಧ್ಯಮಗೋಷ್ಠಿ ನಡೆಸಿದ ಪ್ರಜ್ವಲ್ ರೇವಣ್ಣ, “ಜನತೆ ನೀಡಿದ ಗೌರವಕ್ಕೆ ಚಿರ ಋಣಿ ಯಾಗಿರುತ್ತೇನೆ. ದೇವೇಗೌಡರ ಕೊನೆ ಚುನಾವಣೆ ಸೋಲಿನಲ್ಲಿ ಮುಗಿಸಲು ಇಷ್ಟವಿಲ್ಲ. ದೇವೇಗೌಡರ ಸೋಲು ತೀವ್ರ ನೋವು ತಂದಿದೆ. ರೈತರ ಬಗ್ಗೆ ಧ್ವನಿ ಎತ್ತಲು ದೇವೇಗೌಡರಿಂದ ಮಾತ್ರ ಸಾಧ್ಯ. ದೇವೇಗೌಡರನ್ನು ಮತ್ತೆ ಹಾಸನದಿಂದ ಸ್ಪರ್ಧಿಸುವಂತೆ ಕೋರುತ್ತೇನೆ. ರಾಜೀನಾಮೆ ಬಗ್ಗೆ ದೇವೇಗೌಡರ ಜೊತೆ ಸಮಾಲೋಚನೆ ನಡೆಸುತ್ತೇನೆ’ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ರಾಜೀನಾಮೆ ಬಗ್ಗೆ ಬಿಜೆಪಿ ಟೀಕೆ..!
ಪ್ರಜ್ವಲ್ ರೇವಣ್ಣ ರಾಜೀನಾಮೆ ಬಗ್ಗೆ ಬಿಜೆಪಿಯವರು ವ್ಯಂಗ್ಯವಾಡಿದ್ದಾರೆ. ಇನ್ನಾದ್ರೂ ‘ಜೆಡಿಎಸ್’ ಇಂತಹ ‘ಡ್ರಾಮಾ’ ಮಾಡೋದು ಬಿಡಬೇಕು. ಪ್ರಜ್ವಲ್ ರೇವಣ್ಣ ಚುನಾವಣೆಗೆ ಮೊದಲೇ ಕ್ಷೇತ್ರ ಬಿಟ್ಟುಕೊಡಬೇಕಿತ್ತು. ಗೆದ್ದು ಜನರಿಂದ ಆಯ್ಕೆ ಆದ ಮೇಲೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿರುವುದು ‘ತ್ಯಾಗ ಅಲ್ಲ’ ಬದಲಾಗಿ ಮತದಾರರಿಗೆ ಮಾಡುತ್ತಿರುವ ಅವಮಾನ ಎಂದು ರಾಜೀನಾಮೆ ಖಂಡಿಸಿದ್ದಾರೆ.