ಕೆ.ಆರ್.ಪುರ, ಮಾ. 24: ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಶಖಾಪುರ ವತಿಯಿಂದ ದೊಡ್ಡಗುಬ್ಬಿಯ ಎಐಆರ್ ಹ್ಯೂಮನಿಟೇರಿಯನ್ ಹೋಮ್ ನಲ್ಲಿ ವಾಸಿಸುತ್ತಿರುವ 150 ಹೆಚ್ಚು ನಿರ್ಗತಿಕ, ಅನಾಥ ಮಕ್ಕಳ, ವೃದ್ಧರಿಗೆ ಹಣ್ಣುಹಂಪಲು, ಸಿಹಿ ತಿಂಡಿಗಳನ್ನು ಹಂಚಲಾಯಿತು.
ಕೊತ್ತನೂರು ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜನರಿಗೆ ಆಸರೆಯಾಗಬೇಕು. ಈಗಿನ ಕಾಲದಲ್ಲಿ ಸ್ವಂತ ತಂದೆ ತಾಯಿಯರನ್ನು ಹಾಗೂ ಹುಟ್ಟಿದ ಅಂಗವಿಕಲ, ಬುದ್ಧಿಮಾಂದ್ಯತೆ ಇರುವ ಮಕ್ಕಳನ್ನು ನಿರ್ಲಕ್ಷ್ಯ ತೋರಿ ಆಶ್ರಮ ಸೇರಿಸುವ ಪರಿಪಾಠ ಹೆಚ್ಚಾಗಿದೆ. ಇದು ಕಮ್ಮಿ ಆಗಬೇಕು. ಮೋಕ್ಷ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ಲಕ್ಷ್ಯಿತರಿಗೆ ಆಸರೆಯಾಗಿ ಸಹಾಯಹಸ್ತ ಚಾಚುತ್ತಿರುವುದು ಶ್ಲಾಘನೀಯ ಎಂದರು.
ಎಐಆರ್ ಹ್ಯುಮನಿಟೆರಿಯನ್ ಹೋಮ್ ಉಸ್ತುವಾರಿ ಅಧಿಕಾರಿ ಅಭಾ ಶುಕ್ಲ ಮಾತನಾಡಿ, ಸದಾ ಸಾರ್ವಜನಿಕರ ಬಗ್ಗೆ ಕಾಳಜಿ ಹೊಂದಿ ನಮ್ಮನ್ನು ಕಾಯುತ್ತಿರುವ ಪೋಲಿಸರು ಸಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ. ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಶರಣಗೌಡ ಕಾಳಜಿ ಮೆಚ್ಚುವಂತದ್ದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೊತ್ತನೂರು ಪೋಲಿಸ್ ಠಾಣೆಯ ಪಿಎಸ್ಐ ಮನು, ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಶರಣಗೌಡ, ಬಿ.ಆರ್.ಸಾಪಳೆ, ಯಲ್ಲಪ್ಪ, ಸಂಗಪ್ಪ, ರುದ್ರಪ್ಪಗೊಳು, ಮಹೇಶ್, ಮಾಳಪ್ಪ ಮೇಟಿ, ವಿಠ್ಠಲ ಮಜ್ಜಿಗೆ, ಮಂಜುನಾಥ್ ನಶಪುಡಿ, ಸದಾಶಿವ ಹೊಸೂರು, ಭೀಮಣ್ಣ ನಂದಹಳ್ಳಿ, ರಾಮಕೃಷ್ಣ ಸುಣ್ಣಘಟ ಆಶ್ರಮ ಸಿಬ್ಬಂದಿ ಇದ್ದರು.