ಚಿಕ್ಕಬಳ್ಳಾಪುರ:ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಗ್ರಾಮೀಣ ಕೃಷಿ ಕೂಲಿಕಾರ ಬದುಕಿಗೆ ಆಸರೆಯಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಬಡವರು, ಕೃಷಿ ಕೂಲಿಕಾರರು ಈ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಕನಿಷ್ಠ ಬದುಕಿಗೆ ಪೂರಕವಾದ ಕೂಲಿ ಪಡೆಯಬಹುದು’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.
ತಾಲ್ಲೂಕಿನ ಅಜ್ಜವಾರ ಪಂಚಾಯಿತಿ ವ್ಯಾಪ್ತಿಯ ನಾಯನಹಳ್ಳಿಯಲ್ಲಿ ಆಯೋಜಿಸಿದ್ದ ನರೇಗಾ ಯೋಜನೆ ಉದ್ಯೋಗ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಇನ್ನೂ ಕೃಷಿ ಕೂಲಿಕಾರರಿಗೆ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲಲ. ಆದ್ದರಿಂದ, ಹಲವು ಪ್ರಭಾವಿ ಜನರು ನರೇಗಾ ಯೋಜನೆ ಅಡಿ ಯಂತ್ರಗಳನ್ನು ಉಪಯೋಗಿಸಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ತಿಳಿಸಿದರು.
ನರೇಗಾದಲ್ಲಿ ಭ್ರಷ್ಟಾಚಾರ ತಡೆಯಬೇಕಾದರೆ ಕೃಷಿ ಕೂಲಿಕಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ನಮ್ಮ ಕಾನೂನನ್ನು ಸಮರ್ಪಕವಾಗಿ ಬಳಸದ ಕಾರಣ ಪ್ರಭಾವಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆದ್ದರಿಂದ ಕೃಷಿ ಕೂಲಿಕಾರರು ನರೇಗಾ ಯೋಜನೆ ಸಮರ್ಪಕ ಜಾರಿಗೆ ಮುಂದಾಗಬೇಕಿದೆ’ ಎಂದರು.
ಕೊರೋನಾ ಸಂಕಷ್ಟದಿಂದಾಗಿ ಗ್ರಾಮೀಣ ಭಾಗದ ಯುವ ಜನತೆ ಅದರಲ್ಲಿಯೂ ಪದವೀಧರರು ಉದ್ಯೋಗ ಮಾಡುತ್ತಿದ್ದವರು ಹಳ್ಳಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಆದ್ದರಿಂದ, ಸಂಕಷ್ಟ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ ತಲಾ ೭,೫೦೦ ರಂತೆ ಕನಿಷ್ಠ ೬ ತಿಂಗಳು ನೀಡಬೇಕು. ನರೇಗಾ ಕೂಲಿಯನ್ನು ೬೦೦ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.