ಕೊವೀಡ್-19 ಕೊರೋನಾ ಮಹಾಮಾರಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದರೆ, ನಗರದ ಸಾಯಿ ನಗರದಲ್ಲಿಯ ಕುಟುಂಬವೊಂದು ಮಾಹಿತಿ ನೀಡಲು ನಿರಾಕರಿಸಿ ಕ್ಯಾತೆ ತೆಗೆದ ಘಟನೆ ಜರುಗಿದೆ.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆ ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ಕುಟುಂಬದ ಸದಸ್ಯರ ಮಾಹಿತಿ, ಹೊರಗಿನಿಂದ ಬಂದ ಕುಟುಂಬದ ಸದಸ್ಯರ ಮಾಹಿತಿ ಪಡೆಯುತ್ತಿದ್ದರು. ಅದರಂತೆ ಸಾಯಿ ನಗರದ ಮುಲ್ಲಾ ಎಂಬ ಕುಟುಂಬದವರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಹೈದ್ರಾಬಾದ್, ಬೆಂಗಳೂರಿಂದ ಬಂದಿರುವ ಸುದ್ದಿ ತಿಳಿದ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದರೂ ನಮ್ಮ ಮನೆಯಲ್ಲಿ ೨೦ ಜನ ಅಂತ ಬರೆದುಕೋ, ಅಡ್ರೇಸ್ ಮುಲ್ಲಾ ಅಂತಾ ಬರೆದುಕೋ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಆಶಾಗಳು ತಮ್ಮ ಮೇಲಾಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಉಪನಗರ ಠಾಣೆ ಪೊಲೀಸರು ಕುಟುಂಬದ ಸದಸ್ಯರಿಗೆ ತಾಕೀತು ಮಾಡಿ, ಮಾಹಿತಿ ನೀಡದಿದ್ದರೆ ಪರಿಸ್ಥಿತಿ ಬೇರೆ ಆಗುತ್ತದೆ ಎಂದು ಗದರಿಸಿದ್ದಾರೆ. ಇದರಿಂದ ಹೆದರಿದ ಕುಟುಂಬದವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಂತರ ಅವರಿಗೆ ಹೋಮ್ ಕ್ವಾರಂಟೀನ್ ಸೀಲ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.