ನವದೆಹಲಿ, ಅ. 24 : ಭಾರಿ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದೆ. ಜತೆಗೆ 17 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳು, ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಲಿದ್ದು, ಎರಡೂ ಕಡೆ ಅಧಿಕಾರದಲ್ಲಿರುವ ಬಿಜೆಪಿ ಭಾರಿ ಬಹುಮತದೊಂದಿಗೆ ಸರಕಾರ ರಚನೆ ಮಾಡಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಹೀಗಾಗಿ ಆಡಳಿತ ಪಕ್ಷವು ಹಿಂದಿನ ಬಾರಿಗಿಂತ ಈ ಸಲ ಎಷ್ಟು ಸ್ಥಾನಗಳನ್ನು ಜಾಸ್ತಿ ಗೆಲ್ಲಲಿದೆ ಎನ್ನುವುದಷ್ಟೇ ಈಗ ಉಳಿದಿರುವ ಕುತೂಹಲ. ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ನಾಗಪುರ ನೈಋತ್ಯದಲ್ಲಿ ಮುನ್ನಡೆಯತ್ತ ಸಾಗುತ್ತಿದ್ದಾರೆ. ಮುಂದಿನ ಸಿಎಂ ಎಂದು ಬಿಂಬಿಸಲ್ಪಡುತ್ತಿರುವ ಶಿವಸೇನೆಯ ಆದಿತ್ಯ ಠಾಕ್ರೆ ವರ್ಲಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಭೋಕರ್ನಲ್ಲಿ ಅಶೋಕ್ ಚೌಹ್ಹಾನ್ ಮುನ್ನಡೆ ಸಾಧಿಸುತ್ತಿದ್ದರೆ, ಕೋತ್ರಾದ್ನಲ್ಲಿ ಚಂದ್ರಕಾಂತ್ ಪಾಟೀಲ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಪರ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಹಿನ್ನಡೆಯನ್ನು ಅನುಭವಿಸಿದ್ದಾರೆ.
ಹರಿಯಾಣದಲ್ಲಿ ಕೈ – ಕಮಲ ಜಟಾಪಟಿ
ಮನೋಹರ್ ಲಾಲ್ ಖಟ್ಟರ್, ಭೂಪಿಂದರ್ ಹೂಡಾ ಮುನ್ನಡೆ ಸಾಧಿಸಿದ್ದರೆ, ರಣದೀಪ್ ಸುರ್ಜೇವಾಲಾ ಹಿನ್ನೆಡೆಯಲ್ಲಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಆದರೆ, ಅಚ್ಚರಿಯೆಂಬಂತೆ ಎಕ್ಸಿಟ್ ಪೋಲ್ಗಳಲ್ಲಿ ಬಿಜೆಪಿಗೆ ಸುಲಭ ಗೆಲುವು ಎಂಬುದು ಸುಳ್ಳಾಗಿದ್ದು, ಕೈ ಪಕ್ಷ ಆಡಳಿತಾರೂಢ ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಹರಿಯಾಣದಲ್ಲಿ ಹಾಲಿ ಐವರು ಸಚಿವರಿಗೆ ಹಿನ್ನೆಡೆ ಉಂಟಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಿದ್ದು, ಹರಿಯಾಣ ವಿಧಾನಸಭೆ ಚುನಾವಣೆಯ 90 ಕ್ಷೇತ್ರಗಳಿಗೆ ಮತ ಎಣಿಕೆ ನಡೆಯಲಿದ್ದು, ಬಹುಮತಕ್ಕೆ 46 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ರಣದೀಪ್ ಸುರ್ಜೇವಾಲಾ, ಅನಿಲ್ ವಿಜ್, ಯೋಗೇಶ್ವರ್ ದತ್, ಕುಲದೀಪ್ ಬಿಷ್ಣೋಯ್, ಭೂಪಿಂದರ್ ಹೂಡಾ ಸೇರಿ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.