ರಾಯಚೂರು, ಏ. 20, ನ್ಯೂಸ್ ಎಕ್ಸ್ ಪ್ರೆಸ್: ರಾಯಚೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವತಿ ಶವ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಮೊದಲಿಗೆ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಮಧು ಸಾವಿನ ಬಗ್ಗೆ ಸೋಶಿಯಲ್ ಮೀಡಿಯಾ, ವಿದ್ಯಾರ್ಥಿಗಳು, ಸಾರ್ವಜನಿಕ ವಲಯದಲ್ಲಿ ಭಾರಿ ಪ್ರತಿಭಟನೆ ಹೋರಾಟಗಳು ಶುರುವಾಗಿದ್ದು, ಅಲ್ಲದೆ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಆರೋಪಿ ಸುದರ್ಶನ್ ಯಾದವ್ ನನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡೆತ್ ನೋಟ್ ನಲ್ಲಿ ನಾನು ಫೇಲ್ ಆಗುತ್ತಿದ್ದೇನೆ ಎಂದು ಮಧು ಬರೆದುಕೊಂಡಂತೆ ಬಿಂಬಿಸಲಾಗಿದ್ದು, ಆದರೆ ವಾಸ್ತವವಾಗಿ ಮಧು ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾಗಿರುವುದು ಈಗ ತಿಳಿದುಬಂದಿದೆ. ಸುದರ್ಶನ್ ಪಿಯುಸಿಯಲ್ಲಿ ಮಧುಗೆ ಸಹಪಾಠಿಯಾಗಿದ್ದನೆನ್ನಲಾಗಿದೆ. ಸ್ನೇಹಿತನೆಂಬ ಕಾರಣಕ್ಕೆ ಆತನನ್ನು ಮಧು ಮಾತನಾಡಿಸುತ್ತಿದ್ದು, ಆದ್ರೆ ಆತನ ವರ್ತನೆಯಿಂದ ಇತ್ತೀಚೆಗೆ ಸುದರ್ಶನ್ ಸಹವಾಸದಿಂದ ದೂರವಾಗಿದ್ದರೆನ್ನಲಾಗಿದೆ. ಹೀಗಾಗಿ ಆತ, ಮಧುಗೆ ಕಿರುಕುಳ ಕೊಡಲು ಆರಂಭಿಸಿದ್ದ. ಇದನ್ನು ಆಕೆಯ ತಂದೆ ಕೂಡಾ ನೋಡಿದ್ರು. ಹೀಗಾಗಿ ಅಂದಿನಿಂದ ಮಗಳ ಜೊತೆ ತಂದೆ ಹೋಗುತ್ತಿದ್ದರು. ಆದ್ರೆ ಏಪ್ರಿಲ್ 13 ರಂದು ಮನೆಯಿಂದ ಹೋದ ಮಧು ಮತ್ತೆ ಮನೆಗೆ ವಾಪಸ್ ಬರಲೇ ಇಲ್ಲ. ಮಧು ಸಾವಿಗೆ ನ್ಯಾಯ ಕೊಡಿಸುವಂತೆ ಇಡೀ ರಾಜ್ಯವೇ ಒಕ್ಕೂರಲಿನಿಂದ ಒತ್ತಾಯಿಸುತ್ತಿದೆ. ಯುವತಿಯ ಮರಣೋತ್ತರ ಪರೀಕ್ಷೆ ವರದಿ ಹಾಗೂ ಆರೋಪಿಯ ವೈದ್ಯಕೀಯ ಪರೀಕ್ಷೆ ವರದಿ ಆಧಾರದ ಮೇಲೆ ಪ್ರಕರಣ ನಿಂತಿದೆ.