ಗಂಗಾವತಿ: ತಾಲೂಕಿನ ಆನೆಗೊಂದಿ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನ ಹತ್ತಿರ ಚಿರತೆ 28 ವರ್ಷದ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ, ಪುನಃ ಸಂಗಾಪುರ ಗ್ರಾಮದ ಗುಡ್ಡದ ಶ್ರೀರಂಗರ ನಗರದ ಕುರಿ ಹಟ್ಟಿಗೆ ನುಗ್ಗಿ ಅಲ್ಲಿನ ಅಂಜಿನಪ್ಪ ಎಂಬ ಬಾಲಕನ ಮೇಲೆ ದಾಳಿ ಮಾಡಿದೆ.
ಚಿರತೆ ದಾಳಿ ಮಾಡಿದಾಗ ಬಾಲಕನ ಚೀರಾಟಕ್ಕೆ ಊರಿನ ಗ್ರಾಮಸ್ಥರು ಓಡಿ ಬಂದು ಬಾಲಕನನ್ನು ಬಚಾವ್ ಮಾಡಿದ್ದಾರೆ, ಗಾಯಗೊಂಡ ಬಾಲಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ರೇಣುಕಾ, ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಅವರು ಭೇಟಿ ನೀಡಿ ವಿಚಾರಿಸಿದ್ದಾರೆ.
ಗಂಗಾವತಿ ಸುತ್ತ-ಮುತ್ತ ಸಂಪೂರ್ಣ ಗುಡ್ಡದ ಪ್ರದೇಶವಾಗಿದ್ದು, ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುವುದರಿಂದ ಮತ್ತು ರಾತ್ರಿ ವೇಳೆ ಕಲ್ಲುಗಳನ್ನು ಒಡೆಯುವುದಕ್ಕಾಗಿ ಸ್ಫೋಟಕಗಳನ್ನು ಬಳಸುವುದರಿಂದ ಗುಡ್ಡ ದೇಶದಲ್ಲಿರುವ ಕಾಡು ಪ್ರಾಣಿಗಳಾದ ಕರಡಿ, ಚಿರತೆಗಳು ಗ್ರಾಮಗಳ ಕಡೆಗೆ ಮುಖ ಮಾಡಿಕೊಂಡಿವೆ ಎಂದು ಆ ಭಾಗದ ಜನ ಹೇಳುತ್ತಿದ್ದಾರೆ.