ಬೆಂಗಳೂರು, ಮಾ. 20, ನ್ಯೂಸ್ ಎಕ್ಸ್ ಪ್ರೆಸ್: ಆಟೋ ಚಾಲಕನೊಬ್ಬ 3 ವರ್ಷದ ಮಗುವನ್ನು ಅಪಹರಿಸಿದ್ದ. ಅಪಹರಣವಾಗಿದ್ದ ಬಾಲಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ. ಸಿಸಿ ಕ್ಯಾಮರಾದ ಸುಳಿವು ಆಧರಿಸಿ ಗಿರಿನಗರ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದಾರೆ.
ಡಿಸೋಜಾನಗರ ನಿವಾಸಿಗಳಾದ ಕಲಬುರಗಿ ಮೂಲದ ಚಿನ್ನಪ್ಪ ಮತ್ತು ದೇವಮ್ಮ ದಂಪತಿ ಪುತ್ರ ಭಾಗೇಶ್ ಅಪಹರಣಕ್ಕೊಳಗಾದ ಬಾಲಕ. ಆಟೋ ಚಾಲಕ ಮದ್ದೂರು ಮೂಲದ ಸುರೇಶ್ ತಲೆ ಮರೆಸಿಕೊಂಡಿದ್ದಾನೆ.
ಚಿನ್ನಪ್ಪ ನಗರದಲ್ಲಿ ಗಾರೆ ಕೆಲಸಗಾರ ಈ ದಂಪತಿಗೆ 3 ಗಂಡು ಮಕ್ಕಳಿದ್ದು, ಭಾಗೇಶ್ ಕೊನೆಯವನು. ಅಣ್ಣ ಮೌನೇಶ್ ಜೊತೆ ಭಾಗೇಶ್ ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ಆ ಸಂದರ್ಭದಲ್ಲಿ ಆಟೋದಲ್ಲಿ ಬಂದ ಸುರೇಶ್ ಆತನನ್ನು ಅಪಹರಿಸಿದ್ದ.