ನವದೆಹಲಿ, ಡಿ. 28: ಸರ್ಕಾರದ ಆದೇಶದ ಮೇರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಬೇಕಾದ ಸಂದರ್ಭದಲ್ಲೆಲ್ಲ ಮೊಬೈಲ್ ಸೇವಾ ಕಂಪನಿಗಳಿಗೆ ಪ್ರತಿ ಗಂಟೆಗೆ ₹ 2.45 ಕೋಟಿ ನಷ್ಟವಾಗುತ್ತಿದೆ ಎಂದು ‘ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ)’ ತಿಳಿಸಿದೆ.
ಪೌರತ್ವ ನೀಡುವ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರವು ಸಾವಿರಾರು ಪೊಲೀಸರನ್ನು ನಿಯೋಜಿಸಿದ್ದಲ್ಲದೆ ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ ಹಬ್ಬದಂತೆ ತಡೆಯಲು ದೇಶದ ಹಲವೆಡೆ ಇಂಟರ್ನೆಟ್ ಸ್ಥಗಿತಗೊಳಿಸುವಂತೆ ಸೂಚಿಸಿತ್ತು.
ಉತ್ತರ ಪ್ರದೇಶದ 18 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಕ್ಕೆ ಸರ್ಕಾರ ಅದೇಶಿಸಿತ್ತು ಎಂದು ದೂರಸಂಪರ್ಕ ಉದ್ಯಮದ ಮೂಲಗಳು ತಿಳಿಸಿವೆ. ನವದೆಹಲಿಯ ಹೊರವಲಯಗಳಲ್ಲಿಯೂ ಡಿಸೆಂಬರ್ 28ರ ಬೆಳಿಗ್ಗಿನವರೆಗೆ ಬ್ರಾಡ್ಬ್ಯಾಂಡ್ ಸೌಲಭ್ಯ ದೊರೆಯುವುದಿಲ್ಲ ಎಂದು ಅಂತರ್ಜಾಲ ಸೇವಾಪೂರೈಕೆದಾರ ಸಂಸ್ಥೆಯೊಂದು ಶುಕ್ರವಾರ ಗ್ರಾಹಕರಿಗೆ ಸಂದೇಶ ಕಳುಹಿಸಿತ್ತು.
ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್ಬುಕ್, ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಇಂಟರ್ನೆಟ್ ಸ್ಥಗಿತದಿಂದ ಗಂಟೆಗೆ ಸುಮಾರು ₹ 2.45 ಕೋಟಿ ನಷ್ಟವಾಗಿದೆ’ ಎಂದು ಸಿಒಎಐ ಪ್ರಧಾನ ನಿರ್ದೇಶಕ ರಾಜನ್ ಮ್ಯಾಥ್ಯೂಸ್ ತಿಳಿಸಿದ್ದಾರೆ.