ಹುಬ್ಬಳ್ಳಿ,ಸೆ.5:ಭಾರತೀಯ ಜನತಾ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ತೆಲೆ ಕೆಟ್ಟಿದೆಯಾ ಅಥವಾ ಏನಾಗಿದೆ ಅಂತ ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಟರಿ ಮೂಲಕ ಮುಖ್ಯಮಂತ್ರಿ ಆಗಿದ್ದವರು ಎಂಬ ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿದರು. ರಾಜ್ಯದಲ್ಲಿ ಸ್ಪಷ್ಟವಾದ ಬಹುಮತವನ್ನು ಕಾಂಗ್ರೆಸ್ ಕೊಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ನಿರ್ಣಯ ಅನ್ವಯ ಮುಖ್ಯಮಂತ್ರಿ ಆದವರು. ಆದರೆ, ಭಾರತೀಯ ಜನತಾ ಪಕ್ಷದವರಿಗೆ ಏನಾಗಿದೆ ಗೊತ್ತಿಲ್ಲ. ಯಾಕೆ ಈ ರೀತಿಯಾಗಿ ಮಾತಾಡ್ತಾರೆ ಎಂದರು.
ಮೈಸೂರಿನಿಂದ ಲೋಕಸಭೆಗೆ ಸ್ರ್ಪಧಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ನಿಂದ ಸಂಸದನಾಗಿದ್ದೇನೆ. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ರಾಜಕೀಯ ಜೀವನದ ಅತಿ ಹೆಚ್ಚು ಕಾಲ ಕಾಂಗ್ರೆಸ್ನಲ್ಲಿದ್ದೆ. ಜೆಡಿಎಸ್ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಬಾವುಟ ಬದಲಾಗುತ್ತದೆ. ಆದರೆ, ಅಜೆಂಡಾ ಬದಲಾಗುವುದಿಲ್ಲ. ಯಾವುದೋ ಗಳಿಗೆಯಲ್ಲಿ ಕಾಂಗ್ರೆಸ್ ಬಿಟ್ಟಿದ್ದೆ. ಈಗ ಮತ್ತೊಮ್ಮೆ ಏಕೆ ಕಾಂಗ್ರೆಸ್ನಿಂದ ಸ್ರ್ಪಧಿಸಬಾರದು ಎಂದು ಪ್ರಶ್ನಿಸಿದರು.