ಚಾಮರಾಜನಗರ, ಅ. 26 : ಕೋಟಿ ಕೋಟಿ ಆದಾಯ ಬಂದರೂ ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಗಬ್ಬೆದ್ದು ನಾರುವ ರಸ್ತೆಯಲ್ಲೇ ಮಾದಪ್ಪನ ಉತ್ಸವ ನಡೆಯುತ್ತದೆ. ಕೆಸರು ತುಂಬಿದ ಕಲ್ಲುಮಣ್ಣುಗಳ ದಾರಿಯಲ್ಲೇ ಏಳುಮಲೆ ಒಡೆಯನ ಮೆರವಣಿಗೆ ನಡೆಯುತ್ತದೆ.
ಕೋಟಿ ಕೋಟಿ ಆದಾಯ :
ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿ ತಿಂಗಳು ಕೋಟಿ ಕೋಟಿ ಆದಾಯ ಹರಿದುಬರುತ್ತಿದೆ. ಭಕ್ತರು ನೀಡುವ ಕಾಣಿಕೆ, ವಸತಿಗೃಹಗಳ ಬಾಡಿಗೆ, ಮುಡಿಸೇವೆ, ಚಿನ್ನದ ರಥೋತ್ಸವದ ಸೇವೆ, ಲಾಡು ಮಾರಾಟ ಹೀಗೆ ನಾನಾ ಮೂಲಗಳಿಂದ ವಾರ್ಷಿಕ 25 ಕೋಟಿ ರೂ. ಹೆಚ್ಚು ಆದಾಯ ಇದೆ. ರಾಜ್ಯದ ಅತಿ ಹೆಚ್ಚು ಆದಾಯ ಇರುವ ಮುಜರಾಯಿ ದೇವಸ್ಥಾನಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಇರುವ ಮಾದಪ್ಪನ ಬೆಟ್ಟದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.