ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ದೋಸ್ತಿಗಳು ಹೀನಾಯ ಸೋಲು ಕಂಡಿದ್ದಾರೆ. ಸೋಲಿನ ಕುರಿತು ಪರಾಮರ್ಶೆ ಜೊತೆಗೆ ಮುಂದಿನ ಕಾರ್ಯತಂತ್ರಗಳನ್ನು ಹೆಣೆಯಲು ಸಿಎಂ ಕುಮಾರಸ್ವಾಮಿ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಇದಕ್ಕೂ ಮುಂಚೆ ದೇವೇಗೌಡರ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ದೇವೇಗೌಡರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸೋಲಿನ ಕುರಿತು ಕಾಂಗ್ರೆಸ್ ನಾಯಕರು ನೀಡುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕು.ಹಿಂದಿನಂತೆ ಯಾವುದೇ ಎಡವಟ್ಟುಗಳಾಗದಂತೆ ಸರ್ಕಾರವನ್ನು ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು, ಹಾಗೇ ಅಪರೇಷನ್ ಕಮಲಕ್ಕೆ ಯಾವ ಪ್ರತಿತಂತ್ರ ಹೆಣೆಯಬೇಕು ಎಂಬುದರ ಕುರಿತು ದೇವೇಗೌಡರ ಜೊತೆ ಸಿಎಂ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಸಿಎಂ ಮನೆಯಲ್ಲಿ ಉಪಹಾರಕೂಟ!
ಸೋಲಿನಿಂದ ಕಂಗೆಟ್ಟ ಕೈ ನಾಯಕರು ಕೂಡಾ ಡಿಸಿಎಂ ಪರಮೇಶ್ವರ್ ಮನೆಯಲ್ಲಿ ನಡೆದ ಉಪಹಾರಕೂಟದಲ್ಲಿ ಪಾಲ್ಗೊಂಡಿದ್ದರು. ಉಪಹಾರ ಕೂಟದಲ್ಲಿ ಸೋಲಿನ ಪರಾಮರ್ಶೆ ಮಾಡಲಾಯ್ತು. ಜೆಡಿಎಸ್ ಜೊತೆಗಿನ ದೋಸ್ತಿಯೇ ಹೀನಾಯ ಸೋಲಿಗೆ ಕಾರಣವಾಯ್ತು ಎಂದು ಕೆಲವರು ಅಸಮಾಧಾನ ಕೂಡಾ ತೋಡಿಕೊಂಡಿದ್ದಾರೆ ಎನ್ನಲಾಗಿದೆ.