ಮಂಡ್ಯ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರ ಕ್ಷೇತ್ರ ಮದ್ದೂರು ತಾಲೂಕಿನಲ್ಲಿ ಪ್ರಚಾರ ನಡೆಸಿದ ಅವರು ಉಪ್ಪಿನಕೆರೆಯಲ್ಲಿ ಮಾತನಾಡಿ, ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮಂತ್ರಿಗಳ ಲಿಸ್ಟ್ ನಲ್ಲಿ ನನ್ನ ಹೆಸರಿಲ್ಲ ಎಂದು ಮನೆಗೆ ಬಂದಿದ್ದರು. ಆಗ ಅಂಬರೀಶ್ ಫೋನ್ ಮಾಡಿ, ತಮ್ಮಣ್ಣ ಅವರನ್ನು ಮಂತ್ರಿಯನ್ನಾಗಿ ಮಾಡಿ. ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು. ತಮ್ಮಣ್ಣರಿಗೆ ಮಂತ್ರಿ ಸ್ಥಾನ ಕೊಡಿಸಿದ್ದು ಯಾರು ಎಂದು ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ಅವರು ಹಿರಿಯರು ಎಂದು ಗೌರವ ಕೊಟ್ಟಿದ್ದೇನೆ. ಚುನಾವಣೆ ಬರುತ್ತೆ ಹೋಗುತ್ತೆ. ತಮಣ್ಣನವರು ಅಂಬರೀಶ್ ಅವರಿಗೆ ಅಣ್ಣನಾಗಬೇಕು. ತಮ್ಮಣ್ಣನವರನ್ನು ಓದಿಸಿ ಬೆಳೆಸಿದ್ದು ಯಾರು ಎಂದು ನೀವೇ ಕೇಳಿ? ಅಂಬರೀಶ್ ತಂದೆ ತಮ್ಮಣ್ಣನವರನ್ನು ಚಿಕ್ಕವಯಸ್ಸಿನಿಂದ ಓದಿಸಿದ್ದರು. ಅನ್ನ ಹಾಕಿದ ಮನೆಗೆ ಏನು ಮಾಡಿದ್ದಾರೆ? ಚುನಾವಣೆ ಮುಖ್ಯವಲ್ಲ, ಚುನಾವಣೆ ಬರುತ್ತೆ ಹೋಗುತ್ತೆ. ಅಧಿಕಾರ ಶಾಶ್ವತವಲ್ಲ ಎಂದು ಸುಮಲತಾ ಗುಡುಗಿದ್ದಾರೆ.