ಚಿಕ್ಕಮಗಳೂರು, ಜು. 25 : ಅಡಕೆ ತೋಟದಲ್ಲಿ ಕಳೆ ತೆಗೆಯುವ ವೇಳೆಯಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ.
ಎನ್.ಆರ್.ಪುರ- ಬಾಳೆಹೊನ್ನೂರು ಮಾರ್ಗದಲ್ಲಿರುವ ಗಡಿಗೇಶ್ವರ ಗ್ರಾಮದ ಸಿರಾಜುದ್ದೀನ್ ಎಂಬುವವವರಿಗೆ ಸೇರಿರುವ ದಾಸನಗದ್ದೆ ಎಸ್ಟೇಟ್ನಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾದ ಹೆಬ್ಬಾವು ಹಿಡಿದು ಹೆಬ್ಬೆ ಮೀಸಲು ಅರಣ್ಯಕ್ಕೆ ಬಿಡಲಾಯಿತು.
ಅಡಕೆ ತೋಟದಲ್ಲಿ ಬೆಳೆದಿದ್ದ ಕಳೆಯನ್ನು ಯಂತ್ರದ ಮೂಲಕ ತೆಗೆಯುವಾಗ ತೋಟದ ಮಧ್ಯದಲ್ಲಿ ಹೆಬ್ಬಾವು ಯಾವುದೋ ಪ್ರಾಣಿಯನ್ನು ನುಂಗಿ ಅದನ್ನು ಜೀರ್ಣಿಸಿಕೊಳ್ಳಲು ಒದ್ದಾಡುತ್ತಿತ್ತು. ಇದನ್ನು ಕಂಡ ತೋಟದಲ್ಲಿದ್ದ ಕಾರ್ಮಿಕರು ಉರಗ ತಜ್ಞ ಹರೀಂದ್ರ ಸಂಪರ್ಕಿಸಿದರು.
ಹರೀಂದ್ರ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.