ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿಗೆ ಮುಖಭಂಗ

ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿಗೆ ಮುಖಭಂಗ

ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಮತ್ತೂಂದು ಮುಖಭಂಗ ಅನುಭವಿಸಿದ್ದಾರೆ. ಭಾರತ ಏಕದಿನ ತಂಡವನ್ನು ಆಯ್ಕೆ ಮಾಡಲು ಆಸ್ಟ್ರೇಲಿಯಕ್ಕೆ ತೆರಳಲು ಬಯಸಿದ್ದ ಚೌಧರಿಗೆ, ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌ ಅನುಮತಿ ನಿರಾಕರಿಸಿದ್ದಾರೆ.

ಈ ವರ್ಷದಲ್ಲಿ ಹೀಗೆ ಮೂರನೇ ಬಾರಿ ಚೌಧರಿಗೆ ಅನುಮತಿ ನಿರಾಕರಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌ ಹೊರತುಪಡಿಸಿ, ಉಳಿದ ನಾಲ್ವರು ಆಯ್ಕೆಗಾರರು ಭಾರತದಿಂದಲೇ ಆಯ್ಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಚೌಧರಿ ಅಲ್ಲಿಗೆ ತೆರಳುವ ಅಗತ್ಯವಿಲ್ಲ ಎನ್ನುವುದು ವಿನೋದ್‌ ರಾಯ್‌ ಅಭಿಮತ.

ಡಿ.24ಕ್ಕೆ ಆಸ್ಟ್ರೇಲಿಯ ವಿರುದ್ಧದ ಭಾರತ ಏಕದಿನ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ತಾನೇ ಖುದ್ದಾಗಿ ಆಸ್ಟ್ರೇಲಿಯಕ್ಕೆ ತೆರಳಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಚೌಧರಿ ಬಯಸಿದ್ದರು. ಆದರೆ ಆಯ್ಕೆ ಸಮಿತಿಯ ನಾಲ್ವರು ಸದಸ್ಯರೇ ಭಾರತದಲ್ಲಿ ಕುಳಿತೇ ತಂಡವನ್ನು ಆಯ್ಕೆ ಮಾಡಲು ಸಜ್ಜಾಗಿದ್ದಾರೆ, ಹೀಗಿರುವಾಗ ಚೌಧರಿ ಯಾವ ಕಾರಣಕ್ಕೆ ಆಸ್ಟ್ರೇಲಿಯಕ್ಕೆ ಹೋಗಬೇಕು ಎನ್ನುವುದು ಆಡಳಿತಾಧಿಕಾರಿಗಳ ಪ್ರಶ್ನೆ.

ಆಡಳಿತಾಧಿಕಾರಿಗಳ ಈ ಕಠಿಣ ನಿಲುವು ಬಿಸಿಸಿಐ ಪದಾಧಿಕಾರಿಗಳಿಗೆ ತಲೆನೋವಾಗಿದೆ. ಇದರ ಪರಿಣಾಮ ಬಿಸಿಸಿಐನಲ್ಲಿ ಸತತವಾಗಿ ಒಳಜಗಳ ನಡೆಯುತ್ತಲೇ ಇದೆ. ಸದ್ಯ ಚೌಧರಿಗೆ ಆಗಿರುವ ಈ ಅವಮಾನ ಮುಂದೆ ಯಾವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಹಿಂದೇನಾಗಿತ್ತು?: ಈ ವರ್ಷ ಮಾರ್ಚ್‌ನಲ್ಲಿ ಚೌಧರಿ, ಶ್ರೀಲಂಕಾಕ್ಕೆ 3 ದಿನಗಳ ಪ್ರವಾಸ ಹೊರಟಿದ್ದರು. ಆಗ ಯಾವ ಕಾರಣಕ್ಕಾಗಿ ಅಲ್ಲಿಗೆ ಹೊರಟಿದ್ದೀರಿ ಎಂದು ಆಡಳಿತಾಧಿಕಾರಿಗಳು ಪ್ರಶ್ನಿಸಿದ್ದರು. ಇದನ್ನು ಸೂಕ್ತವಾಗಿ ವಿವರಿಸಲು ಚೌಧರಿ ವಿಫ‌ಲವಾಗಿದ್ದರಿಂದ, ಶ್ರೀಲಂಕಾ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಜೂನ್‌ ತಿಂಗಳಲ್ಲಿ ಇಂಗ್ಲೆಂಡ್‌ನ‌ಲ್ಲಿ ಇನ್ನೂ ಹೆಚ್ಚಿನ ದಿನಗಳ ಕಾಲ ಉಳಿದುಕೊಳ್ಳಲು ಚೌಧರಿ ಬಯಸಿದ್ದರು. ಆಗ ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿತ್ತು. ಚೌಧರಿ ಜು.26ರವರೆಗೆ ಉಳಿದುಕೊಳ್ಳಲು ಚಿಂತಿಸಿದ್ದರೂ, ಆಡಳಿತಾಧಿಕಾರಿಗಳು ಜೂ.8ರವರೆಗೆ ಮಾತ್ರ ಇರಲು ಅನುಮತಿ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos