ಬೆಂಗಳೂರು, ನ.9: ಕರ್ನಾಟಕ ಹೈಕೋರ್ಟ್ಗೆ ಹೊಸದಾಗಿ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ವಕೀಲರಾದ ಎನ್.ಎಸ್. ಸಂಜಯ ಗೌಡ, ಜ್ಯೋತಿ ಮೂಲಿಮನಿ, ಆರ್. ನಟರಾಜ್, ಹೇಮಂತ್ ಚಂದನ ಗೌಡರ್ ಹಾಗೂ ಪ್ರದೀಪ್ ಸಿಂಗ್ ಯೆರೂರು ಅವರನ್ನು ಎರಡು ವರ್ಷಗಳ ಅವಧಿಗೆ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿ ರಜಿಂದರ್ ಕಶ್ಯಪ್ ಆದೇಶ ಹೊರಡಿಸಿದ್ದಾರೆ.
ಶಿಫಾರಸಿನ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿತ್ತು. ಸಂವಿಧಾನದನ ಪರಿಚ್ಛೇದ 224(1) ಅಡಿಯಲ್ಲಿ ಕೇಂದ್ರ ಸರ್ಕಾರದ ಶಿಫಾರಸಿಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದರು. ಇದರಿಂದ ಐವರನ್ನು ನೂತನ ಹೆಚ್ಚುವರಿ ನ್ಯಾಯಮೂರ್ತಿ ಗಳಾಗಿ ನೇಮಕ ಮಾಡಲಾಗಿದೆ. ಧಾರವಾಡ, ಬೆಂಗಳೂರು ಮತ್ತು ಕಲಬುರಗಿ ಹೈಕೋರ್ಟ್ ನ್ಯಾಯ ಪೀಠಗಳಿಗೆ ಒಟ್ಟು 62 ನ್ಯಾಯ ಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಹಾಲಿ 34 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ನೂತನ ನ್ಯಾಯಮೂರ್ತಿಗಳ ನೇಮಕಾತಿಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ.
ಐವರನ್ನು ಹೈಕೋರ್ಟ್ ನ್ಯಾಯ ಮೂರ್ತಿ ಹುದ್ದೆಗೆ ನೇಮಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದಲ್ಲಿ ನ್ಯಾ.ಎಸ್.ಎ ಬೆಬ್ಡೆ ಹಾಗೂ ನ್ಯಾ. ಎನ್.ವಿ.ರಮಣ ಅವರನ್ನೊಳಗೊಂಡ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಅ.3ರಂದು ಶಿಫಾರಸ್ಸು ಮಾಡಿತ್ತು.