ನವದೆಹಲಿ, ಮಾ.26, ನ್ಯೂಸ್ ಎಕ್ಸ್ ಪ್ರೆಸ್: ಎಐಎಡಿಎಂಕೆಯ ಪರಿತ್ಯಕ್ತ ನಾಯಕ ಟಿಟಿವಿ ದಿನಕರನ್ ನೇತೃತ್ವದ ಬಣಕ್ಕೆ ಪ್ರೆಷರ್ ಕುಕ್ಕರ್ನನ್ನು ಸಾಮಾನ್ಯ ಚಿಹ್ನೆಯಾಗಿ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ತಮಗೆ ಇದೇ ಚಿಹ್ನೆ ನೀಡುವಂತೆ ದಿನಕರನ್ ಬಣ ಆಗ್ರಹಿಸಿತ್ತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠವು ದಿನಕರನ್ ಬಣಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆ ನೀಡಲು ನಿರಾಕರಿಸಿದರೂ, ತಮಿಳುನಾಡು ಮತ್ತು ಪುದಚೇರಿಯಲ್ಲಿ ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಈ ಬಣಕ್ಕೆ ಸಾಮಾನ್ಯ ಮುಕ್ತ ಚುನಾವಣಾ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಸಾಮಾನ್ಯ ಚುನಾವಣಾ ಚಿಹ್ನೆ ಪರಿಶೀಲಿಸಲು ಆಯೋಗಕ್ಕೆ ಸೂಚಿಸಿದ ಮಾತ್ರಕ್ಕೆ ದಿನಕರನ್ ಬಣವನ್ನು ರಾಜಕೀಯ ಪಕ್ಷವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಪೀಠ, ಎಲ್ಲ ರಾಜಕೀಯ ಉದ್ದೇಶಗಳಿಗಾಗಿ ಈ ಬಣದ ಅಭ್ಯರ್ಥಿಗಳನ್ನು ಸ್ವತಂತ್ರ ಹುರಿಯಾಳುಗಳು ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.