ಧಾರವಾಡ, ಮಾ.23, ನ್ಯೂಸ್ ಎಕ್ಸ್ ಪ್ರೆಸ್: ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರಾಭಿವೃದ್ಧಿ ಇಲಾಖೆಯ 7 ಜನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ಮಾಡಿ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಖಾದರ್, ಕಟ್ಟಡಕ್ಕೆ ಯಾವ ರೀತಿಯಾಗಿ ಅನುಮತಿ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನ ತರಿಸಿಕ್ಕೊಳ್ಳುತ್ತಿದ್ದೇವೆ. ಬಹುತೇಕ ರೆರಾ ಆ್ಯಕ್ಟನ್ನ ಉಲ್ಲಂಘನೆ ಮಾಡಿದ್ದಾರೆ. ರೆರಾ ಆ್ಯಕ್ಟ್ ಈಗ ಬಂದಿದೆ ಅಷ್ಟೆ. ಇವತ್ತು ನಗರಾಬಿವೃದ್ಧಿ ಯೋಜನೆಯಡಿಯಲ್ಲಿ ಇಂತಹ ಕಳಪೆ ಕಟ್ಟಡಗಳ ಬಗ್ಗೆ ನಗರಾಬಿವೃದ್ಧಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಆ್ಯಕ್ಷನ್ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಸದ್ಯ ನೀತಿ ಸಂಹಿತೆ ಇರುವುದರಿಂದ ಸರ್ಕಾರದಿಂದ ಆದೇಶ ಮಾಡಲು ಆಗುವುದಿಲ್ಲ. ಉನ್ನತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.