ಬೆಂಗಳೂರು, (ಪೀಣ್ಯ), ಜೂ. 20: ಭಾರತೀಯ ಪರಂಪರೆ ಜೀವನದ ಮೌಲ್ಯ, ಯೋಗ, ಸಂಸ್ಕ್ರತಿ, ಜ್ಞಾನದಿಂದಲೇ ನಮ್ಮ ದೇಶ ಪ್ರಬುದ್ದ ಭಾರತವಾಗಿದೆ ಎಂದು ಆರ್ ಎಸ್ ಎಸ್ ನ ಸಹ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.
ಇಂದು ಹಾವನೂರು ಬಡಾವಣೆಯ ವಾಸ್ಕ್ ಯೋಗ ಮತ್ತು ವಿವೇಕಾನಂದ ಆದರ್ಶ ಸಾಧನಾ ಕೇಂದ್ರ ದಲ್ಲಿ “ನಮೋ ಭಾರತ” ಶೀರ್ಷಿಕೆಯಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಬುದ್ದ ಭಾರತ ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು.
ಆರೋಗ್ಯ, ಶಾಸ್ತ್ರ, ಯೋಗ, ಆಯುರ್ವೇದ, ನಮ್ಮಲ್ಲಿ ಮುಂಚೂಣಿ ಯಲ್ಲಿದೆ. 179 ದೇಶಗಳಲ್ಲಿ ಕೋಟ್ಯಾಂತರ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ದೇಶದ ಜನ ಜಗತ್ತಿನ ಬೇರೆ ಬೇರೆ ಕಡೆ ನಾನು ಭಾರತೀಯ ಎಂದು ದೈರ್ಯವಾಗಿ ಹೇಳಿಕೊಳ್ಳುತ್ತಿದ್ದಾರೆ. ಜಗತ್ತಿನ 250 ದೊಡ್ಡ ದೊಡ್ಡ ಕಂಪನಿಗಳಲ್ಲಿ ಶೇಕಡಾ 60 ರಷ್ಟು ಭಾರತೀಯರು ಮಾಲೀಕರು ಅಥವಾ ಮುಖ್ಯಸ್ಥರಾಗಿ ಕಂಪನಿಗಳನ್ನು ನಡೆಸುತ್ತಿದ್ದಾರೆ ಎಂದರು.
ಈ ಹಿಂದೆ ಆರ್ಯ ಭಟ, ಭಾಸ್ಕರ, ಮುಂತಾದ ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಭಾರತೀಯರೇ ಎಂದ ಅವರು, ಈ ಹಿಂದೆ ನಾವು ರಾಕೇಟ್ ಗಳನ್ನ ಉಡಾವಣೆ ಮಾಡಬೇಕಾದರೆ ಬೇರೆ ದೇಶಗಳ ಸಹಾಯ ಬೇಡಬೇಕಾಗಿತ್ತು ಆದರೆ ಈಗ ನಮ್ಮ ದೇಶದ ಜೊತೆ ಬೇರೆಯವರು ಉಡಾವಣೆ ಮಾಡಲು ಹಾತೊರೆಯುತ್ತಿದ್ದಾರೆ, ಇದಕ್ಕೆ ಉದಾಹರಣೆ ಎಂದರೆ ಕಳೆದ ವರ್ಷ ಏಕಕಾಲದಲ್ಲಿ ಉಡಾವಣೆಯಾದ ,104 ರಾಕೆಟ್ ಗಳು ಇದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಧನ್ಯವಾದ ಹೇಳಬೇಕಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲದೇ ಸಾಹಿತ್ಯ, ಸಂಗೀತ, ಶಾಸ್ತ್ರೀಯ ವಾಗಿ ನಮ್ಮ ದೇಶ ಸಮೃದ್ಧ ವಾಗಿದ್ದು, ನಮ್ಮೆಲ್ಲರ ಸಂಕಲ್ಪ ಈ ದೇಶಕ್ಕಾಗಿ ಒಂದೆರಡು ಒಳ್ಳೆಯ ಸಂದೇಶಗಳನ್ನು ಮೈಗೂಡಿಸಿಕೊಂಡು ಎಲ್ಲೇ ಹೋದರು ಆತ್ಮ ಬಲದಿಂದ ತಲೆ ಎತ್ತಿ ಕೊಂಡು ನಾನು ಭಾರತೀಯ ಪ್ರಜೆ ಎಂದು ಹೇಳೋಣ ಎಂದು ಎಲ್ಲರೂ ಸಂಕಲ್ಪ ಮಾಡೋಣ ಎಂದರು.