ಬೆಂಗಳೂರು, ಜು. 29: ಪ್ರತಿ ದಿನ ನಗರಕ್ಕೆ ಕೋಟ್ಯಾಂತರ ಲೀಟರ್ ನೀರು ಅವಶ್ಯಕತೆ ಇದೆ. ಮಹಾನಗರ ಪಾಲಿಕೆ ವಾರದಲ್ಲಿ ಎರಡು ದಿನ ಕಾವೇರಿ ನೀರು ಮತ್ತು ಉಳಿದ ಎರಡು ದಿನ ನಗರದಲ್ಲಿ ಶುದ್ದೀಕರಣ ಮಾಡಿದ ನೀರು ಹಾಗೂ ಬಿಬಿಎಂಪಿ ಕೃತಕ ಕೊಳವೆ ಬಾವಿಗಳ ನೀರನ್ನು ಸರಬರಾಜು ಮಾಡುತ್ತಿದೆ.
ಇಷ್ಟೆಲ್ಲ ಜಲ ಮೂಲಗಳಿದ್ದರೂ ನಗರದಲ್ಲಿರುವ ಜನತೆಗೆ ನೀರಿನ ಕೊರತೆ ಕಾಡುತ್ತಿದೆ.
ಬಹುತೇಕ ವಾಡ೯ಗಳಲ್ಲಿ ಕೆಲವು ಪರಿಸರ ವಾದಿಗಳು ಮತ್ತು ನೀರಿನ ಮೌಲ್ಯ ತಿಳಿದವರು ಮಳೆ ನೀರಿನ ಸ್ವಯಂ ಕೃಷಿ ಮಾಡಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಸ್ವಂತ ಮನೆ ಹೊಂದಿರುವ, ಸ್ವಸಾಮರ್ತ್ಯ ಉಳ್ಳ ಪ್ರಜ್ಞಾವಂತರು ಮಳೆ ನೀರು ಸಂಗ್ರಹಿಸಿ ತಮ್ಮ ಮನೆ ಹಾಗೂ ಪಕ್ಕದ ಮನೆಗೆ ನೀರು ಕೊಡುವ ಔದಾರ್ಯತೆ ಬೆಳೆಸಿಕೊಂಡು ಅರಿವು ಮೂಡಿಸುವ ನಿಟ್ಟಿನಲ್ಲಿ ಚಲನ ಚಿತ್ರ ನಟ ಜಗ್ಗೇಶ್ ಕಾರ್ಯ ಪ್ರವೃತ್ತರಾಗಿರುವುದು ಶ್ಲಾಘನೀಯ.
ಸಿನಿಮಾಗಳಲ್ಲಿ ಸಾಮಾನ್ಯ ನಾಗರೀಕರಿಗೆ ಮಾದರಿ ಪಾತ್ರ ಮಾಡುವ ನಟ ಜಗ್ಗೇಶ್, ಮಳೆ ನೀರು ಕೊಯ್ಲಿನಲ್ಲಿ ನಗರಕ್ಕೆ ಮಾದರಿಯಾಗಿದ್ದಾರೆ.
ಮಲ್ಲೇಶ್ವರಂ ನಿವಾಸಿ ಆಗಿರುವ ಜಗ್ಗೇಶ್ ಕೊಳವೆ ಬಾವಿಗೆ ನೇರವಾಗಿ ಮಳೆ ನೀರು ಇಳಿಯುವಂತೆ ಮಾಡಿಕೊಂಡಿದ್ದರು. 15 ವರ್ಷಗಳಿಂದೆ ಮಳೆ ಬಂದಾಗ ಮನೆ ಮೇಲ್ಚಾವಣಿ ನೀರು ಒಂದು ಸಣ್ಣ ಇಂಗು ಗುಂಡಿ ನಿರ್ಮಿಸಿ ಅದರ ಮೂಲಕ ಬೋರ್ ವೆಲ್ ಗೆ ಹಾಯುವಂತೆ ಮಾಡಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ.
ಮಳೆಗಾಲದಲ್ಲಿ ಬಂದ ನೀರು ಅಂತರ್ ಜಲದ ನಿರೀಕ್ಷಿತ ಮಟ್ಟಕ್ಕಿಂತ ಜಾಸ್ತಿ ವೃದ್ದಿಯಾಗುತ್ತಿರುವುದರಿಂದ ಜಲಮಂಡಳಿ ಪೂರೈಕೆ ಮಾಡುವ ನೀರನ್ನು ಅವಲಂಬಿಸಿಲ್ಲ.
1996 ರಲ್ಲಿ ಮನೆ ನಿರ್ಮಾಣ ಮಾಡುವ ಮುನ್ನ ಕೊಳವೆ ಬಾವಿ ಕೊರೆಯಲಾಗಿತ್ತು. ಮಳೆ ನೀರು ಸಂಗ್ರಹಿಸುವ ವಿಧಾನ ಗೊತ್ತಿರಲಿಲ್ಲ. ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ಮಳೆ ನೀರು ಕೊಯ್ಲು’ ಲೇಖನ ಓದಿ ನಮ್ಮ ಮನೆ ಚಾವಣಿ ಮೇಲಿನ ನೀರು ಅನುಪಯುಕ್ತವಾಗಿ ಹರಿದು ಹೋಗುವ ನೀರನ್ನು ಕೊಳವೆ ಬಾವಿಗೆ ಸಂಗ್ರಹಿಸಲು ಪ್ರಯತ್ನ ಮಾಡಲಾಯಿತು.
ಮೊದಲ ಯತ್ನ ವಿಫಲ ಆದಾಗ ಸ್ವಲ್ಪ ಮನಸ್ಸಿಗೆ ನೋವಾಯಿತಾದರೂ ಮರು ಯತ್ನದಲ್ಲಿ ಪರಿಸರ ಜೀವಿಯೊಬ್ಬರ ಸಲಹೆಯಂತೆ ಒಂದು ಗುಂಡಿ ತೆಗೆದು ಅದರ ತಳದಡಿಗೆ ಕಲ್ಲುಗಳನ್ನು ಹಾಕಿ ನೇರವಾಗಿ ಕೊಳವೆ ಬಾವಿಗೆ ಮಳೆ ನೀರು ಇಂಗುವಂತೆ ಮಾಡಲಾಯಿತು ಎಂದು ಜಗ್ಗೇಶ್ ಹೇಳಿದ್ದಾರೆ.
ನಮ್ಮ ಮನೆಯಲ್ಲಿ ಇರೋದು ನಾಲ್ಕು ಜನ, ನಮಗೆ ನಾವು ಕೊರೆಸಿರುವ ಕೊಳವೆ ಬಾವಿಗೆ ಮಳೆಗಾಲದಲ್ಲಿ ಬಂದು ಶೇಖರಣೆ ಆಗುವ ಮಳೆ ನೀರು ಒಂದು ವರ್ಷ ಬಳಕೆ ಮಾಡಿದರೂ ಖಾಲಿ ಅಗುವುದಿಲ್ಲ. ಹಾಗಾಗಿ ನಾವು ಜಲಮಂಡಳಿ ಪೂರೈಕೆ ಮಾಡುವ ನೀರನ್ನು ಬಳಕೆ ಮಾಡುವುದಿಲ್ಲ ಎಂದು ಹೇಳುವ ಜಗ್ಗೇಶ್ ಮತ್ತವರ ಪತ್ನಿ ಪರಿಮಳ ಅವರು ತಿಳಿಸಿದ್ದಾರೆ.
ಮನೆಯಲ್ಲಿ ಸಣ್ಣದಾದ ಕುಡಿಯುವ ನೀರಿನ ಫಿಲ್ಟರ್ ಘಟಕವನ್ನು ಅಳವಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದ ಜಗ್ಗೇಶ್ ಕುಡಿಯುವ ನೀರಿನ ಶುದ್ದೀಕರಣ ಮಾಡುವಾಗ ಅನುಪಯುಕ್ತ ವಾಗಿ ಚರಂಡಿ ಸೇರುತ್ತಿದ್ದ ನೀರನ್ನು ಸಂಗ್ರಹಿಸಿ ಪಾತ್ರೆ ತೊಳೆಯಲು ಮತ್ತು ಮನೆ ಮುಂದಿರುವ ಹೂವಿನ ಗಿಡಗಳಿಗೆ ಬಳಸಲಾಗುತ್ತಿದೆ.
ಮಳೆ ನೀರು ಸಂಗ್ರಹ ಕುರಿತು ಮಾಹಿತಿ ನೀಡಿದರು
ಮಳೆ ನೀರು ಸಂಗ್ರಹಿಸಲು ಲಕ್ಷಾಂತರ ರೂ ಭರಸಬೇಕೆಂದು ಹಿಂಜರಿಯುತ್ತಾರೆ. ನೀರು ಸಂಗ್ರಹಿಸಲು ಒಂದು ಸಾರಿ ಮಾತ್ರ ಹಣ ಖರ್ಚಾಗುತ್ತದೆ. ಅಷ್ಟೇ ಅದೂ ತೀರಾ ಕಡಿಮೆ ಮೊತ್ತ ಆದರೂ, ತಾವೇ ಸ್ವತಹ ಮಾಡಿಕೊಳ್ಳಬಹುದಾದ ಅತಿ ಸುಲಭದ ಕೆಲಸ ಎಂದು ವಿವರಿಸಿದರು. ಜಗ್ಗೇಶ್ ಮನೆಯಲ್ಲಿ ನಿರ್ಮಿಸಿರಿವ ಇಂಗು ಗುಂಡಿ ಹತ್ತು ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಇಲ್ಲಿಯವರೆಗೂ ನೀರನ ಕೊರತೆ ಕಂಡು ಬಂದಿಲ್ಲ ಎಂದು ಜಗ್ಗೇಶ್ ತಿಳಿಸಿದರು.