ಗದಗ, ಏ. 9, ನ್ಯೂಸ್ ಎಕ್ಸ್ ಪ್ರೆಸ್: 2 ತಿಂಗಳ ಹಿಂದೆ ಮದುವೆಯಾಗಿರುವ ಕಣ್ಣುಕಾಣದ ಅಂಧ ಮಹಿಳೆಯ ಮೇಲೆ ಯುವಕನೋಬ್ಬ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಡೆದಿದೆ. ಗದಗ ಜಿಲ್ಲೆ ಹಾಗೂ ತಾಲ್ಲೂಕಿನ ನಂದಿಗುಳ ಗ್ರಾಮದ ದಂಪತಿ ಅಂಧರಾಗಿದ್ದು, ಕಳೆದ 2 ತಿಂಗಳಿಂದಷ್ಟೇ ವಿವಾಹವಾಗಿದ್ದರು.
ಪತಿ ಪತ್ನಿ ಯರಿಬ್ಬರು ಶೌಚಾಲಯಕ್ಕೆ ತೆರಳಿದ್ದ ಸಂಧರ್ಭದಲ್ಲಿ ಆಕೆಗೆ ಕುಡಿಯಲು ನೀರು ಕೊಟ್ಟು ಪರಿಚಯಮಾಡಿಕೊಂಡ ಯುವಕ ನಿಮ್ಮ ಪತಿ ನಿಮಗಾಗಿ ಹುಡುಕಾಡುತ್ತಿದ್ದಾರೆಂದು ಪುಸಲಾಯಿಸಿ ತನ್ನ ಸೈಕಲ್ ನಲ್ಲಿ ಕೂರಿಸಿಕೊಂಡು ತಲಕಾಡು ರಸ್ತೆಯ ನದಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ.
ಘಟನೆಯಿಂದ ವಿಚಲಿತಳಾದ ಆಕೆ ಪರಿಪರಿಯಾಗಿ ಕೈಮುಗಿದು ಬೇಡಿಕೊಂಡರೂ ಬಿಡದ ಕಾಮುಕ ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪತ್ನಿ ಕಾಣೆಯಾದ ಬಗ್ಗೆ ಆತಂಕಗೊಂಡ ಪತಿ ಪೊಲೀಸರ ಮೋರೆ ಹೋಗಿದ್ದರು.
ಸಾರ್ವಜನಿಕರ ನೆರವಿನೊಂದಿಗೆ ಸಂತ್ರಸ್ತ ಮಹಿಳೆ ಠಾಣೆಗೆ ತೆರಳಿ ಘಟನೆ ಬಗ್ಗೆ ಪೊಲೀಸರಿಗೆ ವಿವರ ನೀಡಿದ್ದಾಳೆ. ಈ ಸಂಬಂಧ ಪಟ್ಟಣ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.