ಗಂಗಾವತಿ, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ತಾಲೂಕಿನ ಆನೆಗೊಂದಿ ಹತ್ತಿರ ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆಯಿಂದಾಗಿ ಮೊಸಳೆ, ಮೀನುಗಳು ಮೃತಪಟ್ಟ ಘಟನೆ ಜರುಗಿದೆ.
ಆನೆಗೊಂದಿಯಿಂದ ನವ ವೃಂದಾವನ ಗಡ್ಡಿಗೆ ತೆರಳುವ ನದಿ ಮಾರ್ಗದಲ್ಲಿ 7 ವರ್ಷದ ಮೊಸಳೆ ಹಾಗೂ ನೂರಾರು ಮೀನುಗಳು ಮೃತಪಟ್ಟಿವೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಚರಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ತುಂಗಭದ್ರಾ ನದಿಯಲ್ಲಿ ವಿವಿಧ ಜಾತಿಯ ಮೊಸಳೆ, ಮೀನು, ಆಮೆ ಮತ್ತು ನೀರನಾಯಿ (ಚೀರನಾಯಿ)ಇವೆ. ಇವುಗಳ ಸಂರಕ್ಷಣೆಗಾಗಿ ನದಿಯಲ್ಲಿ ನೀರು ಅಗತ್ಯವಿದೆ. ಕಂಪ್ಲಿಯಿಂದ ಜಲಾಶಯದವರೆಗೆ ನೀರನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿದ್ದು, ನದಿಗೆ ಸ್ವಲ್ಪ ಪ್ರಮಾಣದ ನೀರು ಹರಿಸುವ ಮೂಲಕ ಜಲಚರಗಳನ್ನು ಸಂರಕ್ಷಣೆ ಮಾಡಬೇಕಿದೆ. ಇದೀಗ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಜಲಾಶಯದಲ್ಲಿರುವ ನೀರು ಡೆಡ್ ಸ್ಟೋರೆಜ್ ತಲುಪಿದ್ದು ಜಲಚರಗಳ ಸಂರಕ್ಷಣೆಗಾಗಿ ಇರುವ ನೀರು ಸಾಲುತ್ತಿಲ್ಲ.