ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೆನ್ ಡ್ರೈವ್ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪಗೆ ಸಂಬಂಧಿಸಿದ ಡೈರಿ, ಪೆನ್ ಡ್ರೈವ್ ಅನ್ನು ತನಿಖಾಧಿಕಾರಿ ಮತ್ತು ನ್ಯಾಯಾಲಯದ ಮುಂದೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಡೈರಿ, ಪೆನ್ ಡ್ರೈವ್ ನೀಡಲು ಈಶ್ವರಪ್ಪ ಆಪ್ತ ವಿನಯ್ ಒಪ್ಪಿಕೊಂಡಿದ್ದು, ನನಗೆ ಭದ್ರತೆ ಕೊಟ್ಟರೆ ಮಾತ್ರ ಪೆನ್ ಡ್ರೈವ್ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿನಯ್ ಬಳಿ ಯಡಿಯೂರಪ್ಪಗೆ ಸಂಬಂಧಪಟ್ಟ ಡೈರಿಯ ಅಸಲಿ ಪೆನ್ ಡ್ರೈವ್ ಇದೆಯಂತೆ. ರಾಜ್ಯ ಪೊಲೀಸರು ಭದ್ರತೆಯನ್ನು ನೀಡಿದರೆ ತನಿಖಾಧಿಕಾರಿ ಅಥವಾ ನ್ಯಾಯಾಲಯಕ್ಕೆ ಡೈರಿ ನೀಡುತ್ತೇನೆ ಎಂದು ತೀರ್ಮಾನ ಮಾಡಿದ್ದಾರೆ. ನನ್ನ ಬಳಿ ಪ್ರಮುಖ ಸಾಕ್ಷ್ಯಾಧಾರಗಳು ಇವೆ. ಅದನ್ನು ನಾನು ನ್ಯಾಯಾಲಯದ ಮುಂದೆ ಇಡಬೇಕು. ಆ ಸಾಕ್ಷ್ಯ ಬಯಲಾದ ಬಳಿಕ ನನ್ನ ಜೀವಕ್ಕೆ ಕುತ್ತು ಬರುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತೆ ನೀಡುವಂತೆ ಇಂದು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಪತ್ರ ನೀಡಿ ವಿನಯ್ ಮನವಿ ಮಾಡಿಕೊಳ್ಳಲಿದ್ದಾರೆ.