ನವದೆಹಲಿ, ಜು. 16 : ಮಲ್ಯ, ಜನರಿಗೆ ವಂಚಿಸಿ ಲಂಡನ್ ಗೆ ಹೋಗಿ ಐಷಾರಾಮದ ಜೀವನ ನಡೆಸುತ್ತಿರುವ ರೀತಿಯಲ್ಲೇ ಸಿಬಲ್ ಕೂಡಾ ವರ್ತಿಸುತ್ತಿರುವ ಕಾರಣ ಅವರನ್ನು ಮಲ್ಯಗೆ ಹೋಲಿಸಬೇಕಾಗಿ ಬಂದಿದೆ ಎಂದು ದತ್ ಕಿಡಿಕಾರಿದ್ದಾರೆ. ವಿಜಯ್ ಮಲ್ಯ, ನೀರವ್ ಮೋದಿ ಭಾರತದಲ್ಲಿ ವಂಚನೆ ಮಾಡಿ ವಿದೇಶಕ್ಕೆ ಪರಾರಿ ವೇಳೆ, ಹಿರಿಯ ಕಾಂಗ್ರೆಸ್ಸಿಗ, ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಸ್ವತಃ ತಾವೇ ನೂರಾರು ಜನರಿಗೆ ವಂಚಿ ಆರೋಪಕ್ಕೆ ತುತ್ತಾಗಿದ್ದಾರೆ.
ಕೆಲ ತಿಂಗಳ ಹಿಂದೆ ಸಿಬಲ್ ತಮ್ಮ ಒಡೆತನದಲ್ಲಿ ಟೀವಿ ಚಾನೆಲ್ ಆರಂಭಿಸಿದ್ದರು. ಕನಿಷ್ಠ 2 ವರ್ಷ ಯಾವುದೇ ತೊಂದರೆ ಇಲ್ಲದೇ ಚಾನೆಲ್ ನಡೆಸಲಾಗುವುದು ಎಂದು ಹೇಳಿ ಹಲವು ಹಿರಿಯ ಪತ್ರಕರ್ತರನ್ನು ಕರೆತಂದಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಚಾನೆಲ್ ಇದೀಗ ಬಾಗಿಲು ಹಾಕುವ ಹಂತ ತಲುಪಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬರ್ಖಾದತ್, ‘ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಸ್ಥಾಪಿಸಿದ್ದ ತಿರಂಗಾ ಟೀವಿಯಲ್ಲಿ ಈಗ ಭಯಾನಕ ಪರಿಸ್ಥಿತಿ ಇದೆ. 200ಕ್ಕೂ ಹೆಚ್ಚು ಸಿಬ್ಬಂದಿಗಳ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವರಿಗೆಲ್ಲಾ 6 ತಿಂಗಳ ವೇತನವನ್ನೂ ನೀಡದೇ ಹೊರಹಾಕುವ ಭೀತಿ ಕಾಡುತ್ತಿದೆ. ಸಾರ್ವಜನಿಕವಾಗಿ ನೈತಿಕತೆಯ ಬಗ್ಗೆ ದೊಡ್ಡದಾಗಿ ಬಿಂಬಿಸಿಕೊಳ್ಳುವ ವ್ಯಕ್ತಿ ಪತ್ರಕರ್ತರನ್ನು ಭೀಕರವಾಗಿ ನಡೆಸುಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.