ಮಡಿಕೇರಿ, ಜು.17 : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳು ಕೂಲಿ ಕಾರ್ಮಿಕರು, ರೈತರು. ಅಂದು ದುಡಿದ್ರೆ ಮಾತ್ರವೇ ಆ ಹೊತ್ತಿನ ಬದುಕು ಅನ್ನೋ ಸ್ಥಿತಿಯಲ್ಲಿರುವ ಜನ, ಇದೀಗ ದುಡಿಯೋದನ್ನ ಬಿಟ್ಟು ಮನೆ ಬಾಗಿಲು ಮುಚ್ಚಿ ಎಲ್ಲರೂ ಆಸ್ಪತ್ರೆ ಸೇರಿದ್ದಾರೆ. ನಿಗೂಢ ಕಾಯಿಲೆಗೆ ಬಳಲಿ, ಹೆದರಿ ಎಷ್ಟೋ ಕುಟುಂಬಗಳು ಗ್ರಾಮದ ಜನರ ಈ ಸ್ಥಿತಿಗೆ ಕಾರಣ ಕಳೆದ 15 ದಿನಗಳಿಂದ ಕಾಡುತ್ತಿರುವ ವಿಚಿತ್ರ ಜ್ವರ ಮತ್ತು ಕಾಯಿಲೆ ಅನ್ನೋದು ಆಶ್ಚರ್ಯದ ವಿಷಯ. 300ಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದಲ್ಲಿ ಈಗ 200ಕ್ಕೂ ಹೆಚ್ಚು ಜನರು ವಿಚಿತ್ರ ಜ್ವರ ಮತ್ತು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಇಲಾಖೆ ಸಿಬ್ಬಂದಿ ಬಂದು ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಆದರೆ ಇದೂವರೆಗೆ ಕಾಯಿಲೆ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡದಿರುವುದು ವಿಪರ್ಯಾಸ ಎಂದು ಗ್ರಾಮಸ್ಥ ಕೃಷ್ಣೇಗೌಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.