ಚನ್ನಮ್ಮ ಕಿತ್ತೂರು, ಅ. 25 : ಕ್ರಾಂತಿಯ ನೆಲ ಚನ್ನಮ್ಮ ಕಿತ್ತೂರಿನಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಗುರುವಾರವೂ ವರುಣನ ಅಡ್ಡಿ ಉಂಟಾಯಿತು. ಮಳೆ ಹನಿಗಳ ಸಿಂಚನದ ಮಧ್ಯೆ ಸಾವಿರಾರು ಜನರು ಕೋಟೆಗೆ ಆಗಮಿಸಿ ಐತಿಹಾಸಿಕ ಪಳಯುಳಿಕೆಗಳನ್ನು ವೀಕ್ಷಿಸಿದರು.
ಹಲವರು ಸಾಂಸ್ಕೃತಿಕ ಸಮಾರಂಭಕ್ಕೆ ಸಾಕ್ಷಿಯಾದರು. ಆದರೆ, ಪ್ರತಿ ವರ್ಷದಷ್ಟು ಸಂಭ್ರಮ ಮತ್ತು ಉತ್ಸಾಹ ಮಾತ್ರ ಕಾಣಲಿಲ್ಲ. ಈ ಹಿಂದೆ ನಡೆದ ಉತ್ಸವಗಳ ವೀಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸುತ್ತಿದ್ದರು. ತಮ್ಮೂರ ಹಬ್ಬದಂತೆ ಇದನ್ನು ಆಚರಿಸಿ ಖುಷಿಪಡುತ್ತಿದ್ದರು. ಚನ್ನಮ್ಮನಿಗೆ ಜೈಕಾರ ಹಾಕಿ ನಾಡಾಭಿಮಾನ ಮೆರೆಯುತ್ತಿದ್ದರು. ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹರಸಾಹಸಪಡುತ್ತಿತ್ತು. ಆದರೆ, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಈ ಬಾರಿ ಉತ್ಸವಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದ್ದು ಕಂಡುಬಂತು.