ಮೈಸೂರು, ಜು. 8 : ಉತ್ತರ ಪ್ರದೇಶದಲ್ಲಿ ಅಪಘಾತದಲ್ಲಿ ಮೈಸೂರು ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಲಖನೌ ಸಮೀಪ ಭಾನುವಾರ ನಡೆದಿದ್ದ ಸಂಭವಿಸಿದ್ದ ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಅವರ ಪತ್ನಿ ಇಂದ್ರಾಣಿ ಗಂಭೀರವಾಗಿ ಗಾಯಗೊಂಡಿದ್ದರು.
ಸೋಮವಾರ ಚಿಕಿತ್ಸೆ ಫಲಿಸದೆ ಇಂದ್ರಾಣಿ ಅಸುನೀಗಿದ್ದರೆ ಚೇತರಿಕೆ ಕಾಣುತ್ತಿದ್ದ ಮುದ್ದುಕೃಷ್ಣ ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತವಾಗಿ ಅಸುನೀಗಿದ್ದಾರೆ.
ಸ್ನೇಹಿತರ ಬಳಗದಲ್ಲಿ ‘ಮುದ್ದು’ ಅಂತಲೇ ಪರಿಚಿತರು. ಕಲೆ, ಕಾವ್ಯ, ನಾಟಕ, ಸಿನೆಮಾ, ಊಟ, ತಿರುಗಾಟ….ಎಲ್ಲದರ ಬಗ್ಗೆಯೂ ಅತ್ಯುತ್ಸಾಹದಿಂದ ಇದ್ದವರು ನಮ್ಮ ಮುದ್ದುಕೃಷ್ಣ ಸರ್. ಯುವಕರನ್ನೂ ನಾಚಿಸುವ ಉತ್ಸಾಹ ಅವರದ್ದು. ಪ್ರತಿಯೊಂದು ವಿಷಯದಲ್ಲೂ ಅಪ್ಡೇಟ್ ಆಗಿರುತ್ತಿದ್ದವರು. ಅನಿಸಿದ್ದನ್ನು ಮುಲಾಜಿಲ್ಲದೆ ನೇರವಾಗಿ ಹೇಳುತ್ತಿದ್ದವರು. ಫೇಸ್ಬುಕ್ಕಲ್ಲಿ ಪ್ರತಿಯೊಬ್ಬರ ಬರ್ತ್ ಡೇಗೆ ಮರೆಯದೆ ವಿಶ್ ಮಾಡುತ್ತಿದ್ದ ನಗುಮೊಗದ ಸ್ನೇಹಜೀವಿ.