ಅಧಿಕಾರಿಗಳ ನಿರ್ಲಕ್ಷ್ಯ ರಸ್ತೆಗಳ ಗುಂಡಿ ಮುಚ್ಚದ ಪಾಲಿಕೆ

ಅಧಿಕಾರಿಗಳ ನಿರ್ಲಕ್ಷ್ಯ ರಸ್ತೆಗಳ ಗುಂಡಿ ಮುಚ್ಚದ ಪಾಲಿಕೆ

ಬೆಂಗಳೂರು, ಅ. 19: ನಗರದ 14 ಸಾವಿರ ಕಿ.ಮೀಟರ್ ರಸ್ತೆಯಲ್ಲಿರುವ ಗುಂಡಿಗಳ ಸಂಖ್ಯೆ ಕೇವಲ 520. ಹೀಗೆಂದು ಸಂಚಾರ ಪೊಲೀಸ್ ವರದಿ ಹೇಳುತ್ತದೆ.

ಪಾಲಿಕೆ ಸಹಾಯ ಆಪ್‌ನಲ್ಲಿ ದಾಖಲಾದ ಗುಂಡಿಗಳ ಸಂಖ್ಯೆ 4,573. ನಗರದಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ ಕುರಿತು ಪ್ರಶ್ನಿಸಿದರೆ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಇಬ್ಬರ ಬಳಿಯೂ ನಿಖರ ಸ್ಪಷ್ಟತೆಯಿಲ್ಲ.

ಪದೇ ಪದೆ ಅಪಘಾತ ಸಂಭವಿಸುವ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುವ ಇನ್ನಿತರೆ ಮಾನದಂಡಗಳನ್ನು ಆಧರಿಸಿ ಸಂಚಾರ ಪೊಲೀಸರು ಸಣ್ಣ ಹಾಗೂ ದೊಡ್ಡ ಪ್ರಮಾಣದ ಗುಂಡಿಗಳ ಸಮೀಕ್ಷೆ ಮಾಡಿ, ಪಾಲಿಕೆಗೆ ಲಿಖಿತ ರೂಪದಲ್ಲಿ ದೂರುಗಳನ್ನು ನೀಡಲಾಗುತ್ತದೆ.

ಗುಂಡಿಗಳ ಪತ್ತೆ ಹಾಗೂ ಮುಚ್ಚುವುದು ನಮ್ಮ ಕೆಲಸವಲ್ಲ. ವಾಹನ ಸವಾರರ ಹಿತದೃಷ್ಟಿಯಿಂದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮುಚ್ಚುವಂತೆ ಪಾಲಿಕೆಯನ್ನು ಕೋರುತ್ತೇವೆ. ಕ್ರಮಕೈಗೊಳ್ಳದಿದ್ದರೆ ತಾತ್ಕಾಲಿಕವಾಗಿ ತಾವೇ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುತ್ತೇವೆ ಎನ್ನುತ್ತಾರೆ ಸಂಚಾರ ಪೊಲೀಸರು.

ವೇಗದ ಮಿತಿ ಕಡಿಮೆ

44 ಸಂಚಾರ ಠಾಣೆ ವ್ಯಾಪ್ತಿಯ ಪ್ರಮುಖ ರಸ್ತೆಗಳು, ನೈಸ್ ರಸ್ತೆ, ಮೇಲು ಸೇತುವೆ, ಕೆಳ ಸೇತುವೆಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕಳೆದ ಐದಾರು ತಿಂಗಳಿಂದ ಸಮೀಕ್ಷೆ ನಡೆಸಿ ಸುಮಾರು 500ಕ್ಕೂ ಅಧಿಕ ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ.

ಪ್ರತಿನಿತ್ಯ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ರಸ್ತೆಗಳಲ್ಲಿ ವೇಗದ ಮಿತಿ ತೀರಾ ಕಡಿಮೆ ಇರುತ್ತದೆ. ಪ್ರತಿ ಗಂಟೆಗೆ 20-30 ಕಿ.ಮೀಟರ್, ಅದಕ್ಕಿಂತ ಕಡಿಮೆ ಇರುವ ಸಾಧ್ಯತೆಯೂ ಇದೆ. ರಸ್ತೆಗಳಲ್ಲಿ ಓಡಾಡುವ ವಾಹನಗಳು ಕೂಡ ಹಾಳಾಗುತ್ತವೆ.

ಓಕಳೀಪುರ, ಶಿವಾನಂದ ವೃತ್ತ, ಮೈಸೂರು ರಸ್ತೆ,ಗಾಳಿ ಆಂಜನೇಯ ದೇವಾಲಯ ಸಮೀಪ, ಗೊರಗುಂಟೆ ಪಾಳ್ಯ ಜಂಕ್ಷನ್, ಆಡುಗೋಡಿ-ಕೋರಮಂಗಲ ರಸ್ತೆ ಹಾಗೂ ನಗರದ ಪ್ರತಿ ವಾರ್ಡ್ಳಲ್ಲಿಯೂ ಸಾವಿರಾರು ಗುಂಡಿಗಳಿವೆ.

ಸರ್ಕಾರದಿಂದಲೇ ಗುಂಡಿಗಳು

ಸರ್ಕಾರದ ಅಂಗ ಸಂಸ್ಥೆಗಳಾದ ಲೋಕೋಪಯೋಗಿ, ಬೆಸ್ಕಾಂ, ಬಿಬಿಎಂಪಿ ಹಾಗೂ ಕೇಬಲ್ ನಿರ್ವಹಣಾ ಸಂಸ್ಥೆಗಳ ಒಂದಿಲ್ಲೊಂದು ಕಾಮಗಾರಿಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಸಹ ಗುಂಡಿಗಳನ್ನು ತೆಗೆದು ತಾತ್ಕಾಲಿಕ ವಾಗಿ ಮಣ್ಣು ಮುಚ್ಚಿ ಸುಮ್ಮನಾ ಗುತ್ತಾರೆ. ಮಳೆ ಅಥವಾ ನಿರಂತರ ವಾಹನಗಳ ಓಡಾಟದಿಂದ ಮತ್ತೆ ಗುಂಡಿಗಳು ಬಾಯ್ತೆರೆದಿರೆಯುತ್ತವೆ. ಮನೆಗಳಿಗೆ ನೀರಿನ ಸಂಪರ್ಕ ಪಡೆಯುವಾಗ ರಸ್ತೆ ಮಧ್ಯೆಯೇ ಅಗೆಯುತ್ತಾರೆ.

ಬಿಬಿಎಂಪಿ ಅಂತಹ ಗುಂಡಿ ತೆರೆದು ಮುಚ್ಚದ ಸಾರ್ವಜನಿಕರ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳುತ್ತಿಲ್ಲ. ಗುಂಡಿಗಳ ಲೆಕ್ಕ ಸಂಚಾರ ಪೊಲೀಸರಾಗಲಿ, ಬಿಬಿಎಂಪಿ ಬಳಿಯಾಗಲಿ ಇಲ್ಲ.

ಮಹಾನಗರಪಾಲಿಕೆ ನಿರ್ಲಕ್ಷ್ಯ

ಅಧಿಕಾರಿಗಳ ಮಾಹಿತಿ ಪ್ರಕಾರ 4573(ಅ.15)ವರೆಗೆ ಗುಂಡಿಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 1104 ಮುಚ್ಚಲು ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. 615 ಗುಂಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ಗುಂಡಿಗಳಿಂದಲೇ ಹತ್ತಾರು ಸಾವು ಸಂಭವಿಸಿದರೂ ಪ್ರತ್ಯೇಕವಾಗಿ ಸರ್ವೇ ಮಾಡದ ಪಾಲಿಕೆ, ಗುಂಡಿ ಮುಚ್ಚಲು ಸಂಪೂರ್ಣ ವಿಫಲವಾಗಿದೆ.

ಹೈಕೋರ್ಟ್ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಹಿಂದಿನ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಗುಂಡಿ ಮುಚ್ಚದ ಎಂಜಿನಿಯರ್‌ಗೆ ದಂಡ ವಿಧಿಸುವುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು.

ವಿವಿಐಪಿ ರಸ್ತೆಗಳಲ್ಲಿ ಗುಂಡಿಗಳಿಲ್ಲ

99 ವಾರ್ಡುಗಳಲ್ಲಿ ಲಕ್ಷಾಂತರ ಗುಂಡಿಗಳನ್ನು ಕಾಣಬಹುದು. ಕೇವಲ ನಾಲ್ಕೈದು ಸಾವಿರ ಗುಂಡಿಗಳ ಲೆಕ್ಕ ನೀಡುತ್ತಾರೆ. ಯಾವ ಎಂಜಿನಿಯರ್ ಕೂಡ ರಸ್ತೆಗಳ ಸಮೀಕ್ಷೆ ನಡೆಸಿ ಗುಂಡಿಗಳ ಮುಚ್ಚುವ ಕಾರ್ಯಕ್ಕೆ ಹೋಗುವುದಿಲ್ಲ. ವಿಧಾನಸೌಧ, ವಿಕಾಸಸೌಧ, ಮುಖ್ಯಮಂತ್ರಿಗಳ ಮನೆ, ವಿಐಪಿ, ವಿವಿಐಪಿ ಗಣ್ಯರ ಮನೆ ಮತ್ತು ಕಚೇರಿಗಳ ಮುಂಭಾಗ ಮಾತ್ರ ಒಂದು ಸಣ್ಣ ಗುಂಡಿ ಬಿದ್ದರೂ ಮುಚ್ಚುತ್ತಾರೆ.

ವೇಗ ನಿಯಂತ್ರಣ

ವಾಹನಗಳ ವೇಗದ ಮಿತಿ ಹಾಗೂ ಅಪಘಾತ ತಡೆಗೆ ರಸ್ತೆಗಳ ಮಧ್ಯೆ ಹಂಪುಗಳನ್ನು ಹಾಕಲಾಗುತ್ತದೆ. ಸೂಚನಾ ಫಲಕದ ಮೂಲಕವೂ ಮಾಹಿತಿ ನೀಡಲಾಗುತ್ತಿತ್ತು. ನಗರದ ಚಿತ್ರಣ ಸಂಪೂರ್ಣ ಬದಲಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳೇ ವಾಹನಗಳ ವೇಗ ಮಿತಿ ನಿಯಂತ್ರಣ ಮಾಡುತ್ತಿವೆ.

 

 

ಫ್ರೆಶ್ ನ್ಯೂಸ್

Latest Posts

Featured Videos