ಹುಬ್ಬಳ್ಳಿ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ‘ಹವಾ’ ಜೋರಾಗಿದೆ. ಉತ್ತರ ಕರ್ನಾಟಕದ ಮತದಾರರು ಬಿಜೆಪಿಗೆ ಒಲಿಯಲು ಸಾಕಷ್ಟು ಕಾರಣವಿದೆ. ಉತ್ತರ ಕರ್ನಾಟಕವನ್ನು ದೋಸ್ತಿ ಸರ್ಕಾರ ಬಂದಾಗಿನಿಂದಲೂ ಕಡೆಗಣಿಸ್ತಾ ಬಂದಿದ್ರು. ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾವ ನಾಯಕರು ಬಳ್ಳಾರಿಯಲ್ಲಿ ಪ್ರಚಾರಕ್ಕೆ ಕಾಲಿಡಲಿಲ್ಲ. ಇನ್ನು ಜೆಡಿಎಸ್ ನಾಯಕರು, ಸ್ವತ: ಮುಖ್ಯಮಂತ್ರಿ ಉತ್ತರ ಕರ್ನಾಟಕದ ಕಡೆ ತಲೆ ಹಾಕದಿರೋದು ಸೋಲಿಗೆ ಬಲವಾದ ಕಾರಣ ಎನ್ನಲಾಗ್ತಿದೆ.
‘ರಮೇಶ್ ಜಿಗಜಿಣಗಿ’ ಕೈ ಹಿಡಿದ ಮತದಾರ..!
ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ಡಾ.ಸುನೀತಾ ಚೌಹಾಣ್ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮತ್ತೆ ‘ಸುರೇಶ್ ಅಂಗಡಿ’ ಜಯಭೇರಿ?
ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಮುನ್ನಡೆ ಸಾಧಿಸಿದ್ದಾರೆ.
ಚಿಕ್ಕೋಡಿ, ಹಾವೇರಿ, ಧಾರವಾಡದಲ್ಲಿ ಗೆಲುವು?
ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ಹಾವೇರಿಯಲ್ಲಿ ಶಿವಕುಮಾರ್ ಉದಾಸಿ, ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಜಯದ ಹಾದಿಯತ್ತ ಸಾಗಿದ್ದಾರೆ.
ಮತ್ತೆ ‘ಖೂಬಾ’ ಕೈ ಹಿಡಿದ ಮತದಾರ!
ಬೀದರ್ ನಲ್ಲಿ ಗೆಲುವಿನ ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಈಶ್ವರ್ ಖಂಡ್ರೆಗೆ ಭಾರೀ ಹಿನ್ನಡೆಯಾಗಿದ್ದು, ಬಿಜೆಪಿಯ ಭಗವಂತ್ ಖೂಬಾ ಮುನ್ನಡೆ ಸಾಧಿಸಿದ್ದಾರೆ.
ಕೊಪ್ಪ, ರಾಯಚೂರಿನಲ್ಲೂ ಕಮಲ ಕಿಲ ಕಿಲ!
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೊನೆ ಕ್ಷಣದವರೆಗೆ ಹರಸಾಹಸ ಪಟ್ಟು ಬಿಜೆಪಿಯ ಟಿಕೆಟ್ ಗಿಟ್ಟಿಸಿದ್ದ ಸಂಗಣ್ಣ ಕರಡಿಯವರನ್ನು ಮತದಾರರು ಕೈ ಹಿಡಿದಿದ್ದಾರೆ. ರಾಯಚೂರಿನಲ್ಲಿ ರಾಜ ಅಮರೇಶ ನಾಯಕ್ 10 ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಹಾಗೂ ಕಾಂಗ್ರೆಸ್ನ ಉಗ್ರಪ್ಪ ನಡುವೆ ಜಿದ್ದಾಜಿದ್ದಿ ನಡೆದಿದೆ.
ಒಟ್ಟಾರೆ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಧಾರವಾಡ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಗೆಲುವಿನ ಸಮೀಪದಲ್ಲಿದ್ದಾರೆ.