ನವದೆಹಲಿ,ಆ. 06 : ಶಂಕಿತ ಉಗ್ರರನ್ನು ಉಗ್ರಗಾಮಿಗಳೆಂದು ಘೋಷಿಸುವ ಕಾನೂನುಬಾಹಿರ ಚಟುವಟಿಕೆ ತಡೆ ಮಸೂದೆಯನ್ನು ಕಳೆದ ವಾರವಷ್ಟೇ ಯಶಸ್ವಿಯಾಗಿ ಅಂಗೀಕರಿಸಿದ್ದ ಅಮಿತ್ ಶಾ, ತನ್ಮೂಲಕ ಉಗ್ರರ ಹೆಡೆಮುರಿ ಕಟ್ಟಲು ಕಾನೂನಿನ ಬಲ ಒದಗಿಸಿದ್ದರು. ಈಗ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಾದ ಹೊಣೆಯನ್ನೂ ಹೊತ್ತಿದ್ದಾರೆ. ಕಾಶ್ಮೀರದ ಕಾನೂನು- ಸುವ್ಯವಸ್ಥೆ ಇನ್ನು ಕೇಂದ್ರ ಸರ್ಕಾರ ಅದರಲ್ಲೂ ಗೃಹ ಇಲಾಖೆಯ ಪರಿಧಿಗೆ ಬರುವುದರಿಂದ ಅವರ ಜವಾಬ್ದಾರಿ ಇನ್ನಷ್ಟುಹೆಚ್ಚಾಗಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಸೋಮವಾರ ಅಮಿತ್ ಶಾ ತಮ್ಮ ರಾಜಕೀಯ ಜೀವನದಲ್ಲಿ ಕೈಗೊಂಡ ಬಹುದೊಡ್ಡ ನಿರ್ಧಾರ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ವೇಳೆ ಅಮಿತ್ ಶಾ ರಾಜ್ಯದ ಗೃಹ ಸಚಿವರಾಗಿದ್ದರು. ಆಡಳಿತ ವೈಖರಿ ಗೊತ್ತಿದ್ದ ಕಾರಣದಿಂದಲೇ ಈ ಬಾರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರ್ಧಾರ ಮೋದಿ ಕೈಗೊಂಡಿದ್ದರು. ಅಮಿತ್ ಶಾ ಅವರನ್ನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಲ್ಲಿಸಲಾಗಿತ್ತು. ಗೆದ್ದು ಬರುತ್ತಿದ್ದಂತೆ ಗೃಹ ಖಾತೆ ನೀಡಲಾಗಿತ್ತು.
ಜಮ್ಮು-ಕಾಶ್ಮೀರದಂತಹ ವಿಚಾರಗಳಲ್ಲಿ ರಹಸ್ಯ ಕಾಪಾಡಿಕೊಂಡು, ನಿರ್ಧಾರಗಳನ್ನು ಜಾರಿಗೊಳಿಸಲು ನಂಬಿಕಸ್ಥ ಬಂಟರೊಬ್ಬರು ಮೋದಿ ಅವರಿಗೆ ಬೇಕಾಗಿದ್ದರು. ಆ ಸ್ಥಾನಕ್ಕೆ ಮೋದಿ ಅವರು ಅಮಿತ್ ಶಾ ಅವರನ್ನು ಆಯ್ಕೆ ಮಾಡಿಕೊಂಡರು. ಅವರ ಆಯ್ಕೆ ಸರಿಯಾಗಿಯೇ ಇದೆ ಎಂಬುದನ್ನು ಅಮಿತ್ ಶಾ ಮತ್ತೊಮ್ಮೆ ನಿರೂಪಿಸಿದ್ದಾರೆ.