ಬೆಳಗಾವಿ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಕಾಂಗ್ರೆಸ್ ಕಾರ್ಯಕರ್ತರ ಆಡಿಯೋ ಕ್ಲಿಪ್ ವೈರಲ್ ಆಗಿರುವ ಕುರಿತು ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಂಸದ ಮುದ್ದಹನುಮೇಗೌಡ ಮತ್ತು ಕೆ ಎನ್ ರಾಜಣ್ಣ ಹಣ ತಗೊಂಡಿಲ್ಲ. ಅವರ ವಿರುದ್ಧ ಅಪಪ್ರಚಾರ ಮಾಡಿರುವ ಕಾರ್ಯಕರ್ತ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಎಂ ಹೇಳಿದ್ದಾರೆ. ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕಾಂಗ್ರೆಸ್ ಮುಖಂಡ ರಾಜಣ್ಣ ಹಣ ಪಡೆದು ನಾಮಪತ್ರ ವಾಪಸ್ ಪಡೆದಿಲ್ಲವೆಂದು ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣ ಪಡೆದು ನಾಮಪತ್ರ ಹಿಂಪಡೆದಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದರು.
ಕಾರ್ಯಕರ್ತ ದರ್ಶನ್ ಮಾಡಿರುವ ಆರೋಪ ನಿರಾಧಾರ. ಯಾವುದೇ ದಾಖಲೆ ಇಲ್ಲದೆ ಮಾತನಾಡುವುದು ಸರಿಯಲ್ಲ. ಹಣ ತೆಗೆದುಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ಮುದ್ದಹನುಮೇಗೌಡ ಹಾಗೂ ರಾಜಣ್ಣ ಅವರಿಗಿಲ್ಲ. ಆರೋಪ ಮಾಡಿರುವ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.