ಹುಬ್ಬಳ್ಳಿ,ಫೆ. 01: ಜಮುಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಯೋಧ ಈಶ್ವರಪ್ಪ ಸೂರಣಗಿ ಅವರ ಮೃತದೇಹ ಇಂದು ಗ್ರಾಮಕ್ಕೆ ಆಗಮಿಸಿದೆ. ಜ. 30 ರಂದು ಜಮ್ಮುಕಾಶ್ಮೀರದಲ್ಲಿ ತಮ್ಮ ಸರ್ವಿಸ್ ರೈಫಲ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಗುಡಗೇರಿ ಗ್ರಾಮಕ್ಕೆ ಆಗಮಿಸಿ, ಗುಡಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.
ಬಳಿಕ ಯೋಧನ ಸ್ವ ಗ್ರಾಮವಾದ ಬರದ್ವಾಡ ಗ್ರಾಮಕ್ಕೆ ತೆರಳಿತು. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಅಂತ್ಯಕ್ರಿಯೇ ನಡೆಸಲಾಗುವದು.
ಮೃತ ಯೋಧ ಕಳೆದ 21 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ಜನವರಿ 7 ರಂದು ಊರಿಗೆ ಬಂದು ಹೋಗಿದ್ದರು. ಪ್ರಸ್ತುತ ಜಮ್ಮುವಿನ ಸಿ.ಆರ್.ಪಿ.ಎಫ್.ಬಟಾಲಿಯನನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲವೇ ತಿಂಗಳುಗಳಲ್ಲೇ ನಿವೃತ್ತಿ ಕೂಡ ಹೊಂದುವವರಿದ್ದರು. ಆದರೆ, ಯೋಧನ ಸಾವು ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಮೃತರು ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ.