ಡಿ. 29 : ಸುಂದರವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಬೀಸಿದಂತೆ ಮಗನ ಅಕಾಲಿಕ ನೋವು ಕುಟುಂಬಕ್ಕೆ ಅಘಾತ ನೀಡಿದಾಗ ಕಣ್ಣೀರು ಸುರಿಸಿ ಮೌನವಾಗದ ಆ ಕುಟುಂಬ ಸೊಸೆಯ ಬಾಳಿಗೆ ಬೆಳಕಾಗಿರುವುದಲ್ಲದೆ ಸೊಸೆಯನ್ನು ಮಗಳಾಗಿ ಸ್ವೀಕರಿಸಿ ಮರು ಮದುವೆಯ ಮೂಲಕ ವರಿಸಿದ ವರನನ್ನೂ ಮನೆ ಅಳಿಯನನ್ನಾಗಿಸಿದ ಕತೆ ಇದು.
ಹೌದು ಅವಿಭಕ್ತ ಕುಟುಂಬ ಮರೆಯಾಗಿ ವಿಭಕ್ತ ಕುಟುಂಬಗಳ ಪಾರಮ್ಯದ ಕಾಲಘಟ್ಟವೂ ಕಳೆಯುತ್ತ ಬಂದು ಈಗ ಸ್ವತಃ ತಂದೆ, ತಾಯಿ, ಮಗ ಮತ್ತು ಸೊಸೆಯ ನಡುವೆಯೇ ಸಂಬಂಧ ಹಳಸಿ ಬೇರೆ ಬೇರೆ ಸೂರಿನಲ್ಲಿರುವ ಪರಿಸ್ಥಿತಿ ಇದೆ. ಮಾತ್ರವಲ್ಲ ಸ್ವಂತ ಮಗ ಬದುಕಿದ್ದಲ್ಲಿಯೇ ಸೊಸೆಯನ್ನು ಮಗಳಂತೆ ಸ್ವೀಕರಿಸುವ ಮನೋಭಾವ ಅತಿ ವಿರಳ.
ಹೀಗಿರುವ ಈ ಕಾಲಘಟ್ಟದಲ್ಲಿ ಮದುವೆಯಾಗಿದ್ದ ಮಗನನ್ನು ಕಳೆದುಕೊಂಡಿದ್ದ ದಂಪತಿ ತಮ್ಮ ಸೊಸೆಯನ್ನು ಮನೆಯಲ್ಲಿಯೇ ಮಗಳಂತೆ ಇರಿಸಿಕೊಂಡಿರುವುದಲ್ಲದೆ ಮರು ಮದುವೆಯ ಮೂಲಕ ಆಕೆಯ ಬದುಕಿಗೆ ಹೊಸ ಬಾಳು ಕಲ್ಪಿಸಿದ್ದಾರೆ. ಜತೆಗೆ ವರನನ್ನೂ ತಮ್ಮ ಮನೆಯಲ್ಲಿಯೇ ಇರುವಂತೆ ಬಾಂಧವ್ಯ ಬೆಸೆದ ಅಪರೂಪದ ನಿಜ ಕತೆಯ ಮುಂದೆ ಯಾವ ಸಿನಿಮಾದ ಕತೆಯೂ ಸರಿಸಾಟಿಯಲ್ಲ.
ಇದೊಂದು ಗ್ರಾಮೀಣ ಪ್ರದೇಶದ ಊರು. ಮಾರುತೀಪುರ ಗ್ರಾಪಂ ವ್ಯಾಪ್ತಿಯ ಹೊಸಕೆಸರೆ. ಅಲ್ಲಿ ವಾಸವಾಗಿರುವ ಕುಟುಂಬ ಕಡೇಕಲ್ ಕುಟುಂಬ. ಇದರ ಯಜಮಾನ ನರಸಿಂಹ ಮತ್ತು ಪತ್ನಿ ಲೋಲಾಕ್ಷಿ. ಈ ದಂಪತಿಗೆ ಪ್ರಶಾಂತ್ ಎನ್ನುವ ಮಗನಿದ್ದ. ಆತನಿಗೆ ಸಾಗರ ತಾಲೂಕು ಗೌತಮಪುರ ಸಮೀಪದ ಹಿರೇಹಾರಕ ಗ್ರಾಮದ ಸಾಲೂರು ಮನೆಯ ಮಂಜುನಾಥ ಮತ್ತು ರೇಣುಕಮ್ಮ ದಂಪತಿ ಪುತ್ರಿ ವೀಣಾ ಜತೆ ಕಳೆದ 4 ವರ್ಷಗಳ ಹಿಂದೆ ವಿವಾಹ ನಡೆದಿತ್ತು. ಆದರೆ ದುರದೃಷ್ಟವಶಾತ್ ಪ್ರಶಾಂತ್ 2 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಇನ್ನೂ 22 ವರ್ಷದ ವೀಣಾಗೆ ಪತಿಯ ಸಾವು ನಿತ್ಯ ಜೀವನದಲ್ಲಿ ಕಣ್ಣೀರಿಗೆ ಕಾರಣವಾಗಿತ್ತು. ಮಗ ಯಶ್ಮಿಕ್ನ ಭವಿಷ್ಯ ರೂಪಿಸುವುದು ಮಾತ್ರವಲ್ಲ ಇಳಿ ವಯಸ್ಸಿಗೆ ಜಾರುತ್ತಿರುವ ಗಂಡನ ತಂದೆ ತಾಯಿಯನ್ನು ಸಾಕುವ ಜವಾಬ್ದಾರಿಯೂ ಆಕೆಯ ಮುಂದಿತ್ತು. ಕಾರಣ ಬೇರೆ ಗಂಡು ಮಕ್ಕಳು ಆ ದಂಪತಿಗೆ ಇರಲಿಲ್ಲ.