ಮೈಸೂರು: ಮೈಸೂರು ತಾಲೂಕಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಕಾರು ಡಿಕ್ಕಿಯಾಗಿ ಹುಲಿ ಸಾವಿಗಿಡಾಗಿದೆ. ತಡರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಸುಮಾರು ಒಂದುವರೆ ವರ್ಷದ ಹುಲಿ ಕಾರು ಡಿಕ್ಕಿಯಾಗಿದೆ. ಮೃತಪಟ್ಟ ಹುಲಿ ತಲೆಯ ಭಾಗಕ್ಕೆ ತುಂಬಾ ಪೆಟ್ಟಾಗಿರುವುದರಿಂದ ಸ್ಥಳದಲ್ಲೇ ಸಾವನ್ನಪ್ಪಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗವು ಜಕಂಗೊಂಡಿದೆ.
ಮೃತ ಗಂಡು ಹುಲಿಯನ್ನು ಅರಣ್ಯ ಇಲಾಖೆಯು ‘ಟಿ6’ ಎಂದು ಗುರುತಿಸಿದೆ. ಮೃತ ಹುಲಿಯು ಕೆಲವು ವಾರಗಳ ಹಿಂದೆ ಸಿಂದುವಹಳ್ಳಿ-ಬ್ಯಾಟಳ್ಳಿಯಲ್ಲಿ ಕಾಣಿಸಿಕೊಂಡಿತ್ತು. ಮತ್ತು ಎರಡು ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್ನಲ್ಲಿ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಟೊಯೊಟಾ ಎಟಿಯೋಸ್ ವಾಹನವು ಹುಲಿಗೆ ಡಿಕ್ಕಿ ಹೊಡೆದಿದ್ದು, ಹುಲಿ ಮರಿ ತಲೆಗೆ ಗಾಯವಾಗಿದೆ ಬಳಿಕ ಸಾವನ್ನಪ್ಪಿದೆ. ಸದ್ಯ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾವಳಿಯಂತೆ ಹುಲಿ ಮರಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ವರದಿ ನಂತರ ಪ್ರಾಣಿಯ ದೇಹವನ್ನು ವಿಲೇವಾರಿ ಮಾಡಲಾಗುತ್ತೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವಿಧಾನದಂತೆ ಮೈಸೂರು ವೃತ್ತ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಬಂಡೀಪುರ ಮತ್ತು ಮೈಸೂರಿನ ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸಾವನ್ನಪ್ಪಿದ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವಿಧಿವಿಧಾನದಂತೆ ಹುಲಿಯ ಕಳೇಬರವನ್ನು ವಿಲೇವಾರಿ ಮಾಡಲಾಗಿದೆ. ಅದಕ್ಕೂ ಮುನ್ನ ಹುಲಿ ಮೃತಪಟ್ಟ ಸ್ಥಳಕ್ಕೆ ಮೈಸೂರು ವಲಯ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ, ಲಕ್ಷ್ಮಿನಾರಾಯಣ್, ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.