ಬೆಂಗಳೂರು, ಡಿ. 20: ನೆನ್ನೆ ರಾಜ್ಯದ ಕೆಲವು ಕಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಕರಾವಳಿಯಲ್ಲಿ ನಡೆದ ಪ್ರತಿಭಟನೆ ಕಿಚ್ಚು ಎಲ್ಲೆ ಮೀರಿತ್ತು. ಪ್ರತಿಭಟನಾಕಾರರ ಹೋರಾಟ ನಿಯಂತ್ರಿಸಲು ಮುಂದಾದ ಪೊಲೀಸರ ಗೋಲಿಬಾರ್ಗೆ ಇಬ್ಬರು ಬಲಿಯಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಕರಾವಳಿಯ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿನ್ನೆ ರಾತ್ರಿಯಿಂದ ಪರಿಸ್ಥಿತಿ ಹತೋಟಿ ಯಲ್ಲಿದೆ. ಈಗಾಗಲೇ ಅಲ್ಲಿನ ಮುಸ್ಲಿಂ ಮುಖಂಡರ ಜತೆ ಚರ್ಚೆ ನಡೆಸಿದ್ದೇವೆ ಎಂದರು.
ನಗರದ ಧರ್ಮಗುರುಗಳ ಜತೆ ಚರ್ಚಿಸಿದ್ದಾರೆ. ಇಂದು ನಗರದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೂ ವಿಶೇಷ ಭದ್ರತೆ ನೀಡಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಭದ್ರತೆ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.
ಭದ್ರತೆಗೆ ಎಲ್ಲ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗುವಂತೆ ಅವರು ಸೂಚಿಸಿದ್ದು, ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ವಿಧಿಸಲಾಗಿದೆ. ನಿನ್ನೆ ನಡೆದ ದಾಳಿ ಹೊರಗಡೆಯಿಂದ ಬಂದವರಿಂದ ನಡೆದ ಕೃತ್ಯವಾಗಿದೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕ್ರಮ ಸರಿಯಲ್ಲ. ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದು.