ಕೋಲಾರ: ಏಕಾಂತ ಕವಿ ಸಮಯವಲ್ಲ ಅದೊಂದು ಕವಿತ್ವದ ಸಮಯ. ಲೋಕಾಂತದ ಸ್ಪರ್ಶವಿಲ್ಲದೆ ಕವಿಯಾಗಲು ಅಸಾಧ್ಯ, ಯಾವ ಏಕಾಂತವು ಕಲೆಯಾಗದು ಎಂದು ಸಾಹಿತಿ ಡಾ. ಶರಣಪ್ಪ ಗಬ್ಬೂರ್ ಅಭಿಪ್ರಾಯಪಟ್ಟರು.
ಕೋಲಾರ ನಗರದ ಅಂಬೇಡ್ಕರ್ ಭವನದಲ್ಲಿ ಕಸ್ತೂರಿ ಕನ್ನಡ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕವಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿ ಸತ್ತರೆ ನಾಲ್ಕು ದಿನ ನೋವು, ವ್ಯಕ್ತಿತ್ವ ಸತ್ತರೆ ಜೀವನ ಪರ್ಯಂತ ನೋವು. ನಮ್ಮ ವ್ಯಕ್ತಿತ್ವ ಯಾವಾಗಲು ನಮಗೆ ಮತ್ತು ಬೇರೆಯವರಿಗೆ ಮಾದರಿ ಆದರ್ಶಪ್ರಾಯವಾಗಬೇಕು. ಪ್ರತಿಯೊಬ್ಬರಿಗೂ ನಾನು ಬೆಳೆಯಬೇಕೆನ್ನುವ ಕನಸಿರಬೇಕು ಎಂದು ಹೇಳಿದರು.
ಪ್ರತಿಯೊಬ್ಬರ ಮನಸ್ಸಿನಲ್ಲಿರಲು ಸಾಧ್ಯ. ಎಲ್ಲಿತ್ತು ಇಷ್ಟೊಂದು ಕವಿತೆ, ಯಾವುದು ಇದರ ಹೊತ್ತು, ಉಳಿಯುತ್ತದೆಯೇ ಇದು, ನಾನು ಹೋದ ಮೇಲೂ ಸತ್ತೂ, ಯಾರಿಗೂ ಗೊತ್ತು ಎನ್ನುವ ಸಿಪಿಕೆಯವರ ಕವಿತೆಗಳಂತೆ ನಮ್ಮೆಲ್ಲರ ಕಾವ್ಯ ಪ್ರಬುದ್ಧಮಾನಕ್ಕೆ ಬಂದಾಗ ಮಾತ್ರ ನಾವು ಮತ್ತು ನಮ್ಮ ಸಾಹಿತ್ಯ ಉಳಿಯುತ್ತದೆ ಎಂದರು.
ಕನ್ನಡ ಪರ ಹೋರಾಟಗಾರರಾದ ರಂಗರಾಜಯ್ಯ ಅವರು ಮಾತಾನಾಡಿ ಏನಾದರೂ ಆಗು ಮೊದಲು ಮಾನವನಾಗು ಎನ್ನುವ ಕುವೆಂಪು ಅವರ ನುಡಿಮುತ್ತುಗಳನ್ನು ಹೇಳುತ್ತಾ ಸಮಾಜಮುಖಿಯಾಗಿ ಮನುಷ್ಯ ಕಾರ್ಯೋನ್ಮುಖರಾಗಲು ಪ್ರಯತ್ನಿಸಬೇಕು ಎಂದರು.