ಬಳ್ಳಾರಿ: ಆ ರೈತ ಸಾಲ ಮಾಡಿ ದಾಳಿಂಬೆ ಬೆಳೆ ಬೆಳೆದಿದ್ದ, ದಾಳಿಂಬೆ ಬೆಳೆಯನ್ನು ಇನ್ನೂ 4 ದಿನಗಳಲ್ಲಿ ಬಿಡಿಸಿ ಮಾರುಕಟ್ಟೆಗೆ ಕಳಿಸಬೇಕು ಎನ್ನುವಷ್ಟರಲ್ಲಿ, ಆ ದಾಳಿಂಬೆ ಗದ್ದೆಗೆ ಬೆಂಕಿ ಬಿದ್ದಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಈ ರೀತಿಯ ದುಷ್ಟ ಕೆಲಸ ಮಾಡಿದ್ದಾರೆ. ಸುಟ್ಟು ಕರಕಲಾಗಿರುವ ದಾಳಿಂಬೆ ಗಿಡಗಳನ್ನು ನೋಡಿ ರೈತ ಚಟಪಡಿಸುತ್ತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಇನ್ನೇನು ದಾಳಿಂಬೆ ಬೆಳೆ ಕೈಗೆ ಬರಬೇಕು ಎನ್ನುವಷ್ಟರಲ್ಲಿ 6 ಎಕರೆ ದಾಳಿಂಬೆ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ರೈತ ನಾಗರಾಜ್ ಗೆ ಸೇರಿದ ದಾಳಿಂಬೆ ಬೆಳೆಗೆ ಬೆಂಕಿ ಇಟ್ಟಿದ್ದಾರೆ. ಇದರಿಂದ ರೈತ ನಾಗರಾಜ್ ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.