ನರೇಗಾ ಫ್ಲಾಪ್

 ನರೇಗಾ ಫ್ಲಾಪ್

ಬೆಂಗಳೂರು, ನ. 29:  ನರೇಗಾ ಯೋಜನೆ ನಗರ ಜಿಪಂ ವ್ಯಾಪ್ತಿಯ ಜನರು ಉತ್ಸಾಹ ತೋರುತ್ತಿಲ್ಲ. ಸಕಾಲಕ್ಕೆ ಸರಿಯಾಗಿ ಸರ್ಕಾರ ಜನರ ಬ್ಯಾಂಕ್ ಖಾತೆಗೆ ಹಣ ಹಾಕಿದರೂ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಕ್ಕೆ ಗ್ರಾಮಸ್ಥರು ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಉದ್ಯೋಗಕ್ಕಾಗಿ ವಲಸೆ ನಿಯಂತ್ರಣ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಉತ್ತೇಜಿಸುವುದು, ಗ್ರಾಮೀಣ ಮಹಿಳೆಯರ ಸಬಲೀಕರಣ, ಅರಣ್ಯಪ್ರದೇಶ ಹೆಚ್ಚಳ ಸೇರಿದಂತೆ ಹಲವು ಕಾರಣಕ್ಕಾಗಿಯೇಈ ಹಿಂದೆ ಯುಪಿಎ ಸರ್ಕಾರ 2006ರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಜಾರಿಗೆ ತಂದಿತ್ತು.

ಯೋಜನೆಯಿಂದ ರಾಜ್ಯದ ಹಲವು ಭಾಗಗಳ ಜನರಿಗೆ ಅನುಕೂಲವಾಗಿದೆ. ಆದರೆ ನಗರ ಜಿಪಂವ್ಯಾಪ್ತಿಯ ಜನರು ಮಾತ್ರ ರಾಜ್ಯದ ಇತರೆ ಕಡೆಗಳಲ್ಲಿ ಈ ಕೆಲಸಕ್ಕೆ ತೋರಿದಷ್ಟು ಉತ್ಸಾಹ ತೋರುತ್ತಿಲ್ಲ. ನಗರ ಜಿಪಂ ವ್ಯಾಪ್ತಿಯಲ್ಲಿ ಅನೇಕಲ್, ಬೆಂಗಳೂರು ದಕ್ಷಿಣ, ಉತ್ತರ ಮತ್ತು ಪಶ್ಚಿಮ ತಾಲೂಕುಗಳಿವೆ. ಇವುಗಳ ವ್ಯಾಪ್ತಿಗೆ ಸುಮಾರು ೯೬ ಗ್ರಾಪಂಗಳು ಬರುತ್ತವೆ. ಈ ಎಲ್ಲಾ ಗ್ರಾಪಂಗಳು ಬೆಂಗಳೂರು ನಗರಕ್ಕೆ ಹೊಂದಿಕೊಡಿರುವ ಹಿನ್ನೆಲೆಯಲ್ಲಿ ಅಧಿಕ ಕೂಲಿ ನೀಡುವ ಕೆಲಸಗಳನ್ನು ಅರಸಿ ನಗರದತ್ತ ಮುಖ ಮಾಡುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೆಲಸದತ್ತ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಒಬ್ಬ ವ್ಯಕ್ತಿಗೆ ದಿನಕ್ಕೆ249 ರೂ.ದಿನ ಕೂಲಿ ನೀಡಲಾಗುತ್ತದೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನ ವೇತನವಿದೆ. ಈ ಕೂಲಿ ನಗರ ಜಿಪಂ ವ್ಯಾಪ್ತಿಯ ನಿವಾಸಿಗಳಿಗೆ ಸಾಲದು. ಪ್ರತಿನಿತ್ಯ ನಗರ ಪ್ರದೇಶಕ್ಕೆ ಕೂಲಿಗಾಗಿ ತೆರಳುವ ಅವರು ದಿನಕ್ಕೆ ಸುಮಾರು ೫೦೦ ರಿಂದ ೬೦೦ರೂ.ವರೆಗೆ ಸಂಪಾದಿಸುತ್ತಾರೆ. ಹೀಗಾಗಿಯೇ ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂದು ನರೇಗಾ ಯೋಜನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಗರ ಜಿಪಂ ವ್ಯಾಪ್ತಿಯಲ್ಲಿ ವರ್ಷಕ್ಕೆ ಸುಮಾರು ೧.೩ ಲಕ್ಷ ಜನರಿಗೆ ಕೆಲಸ ನೀಡಬೇಕು. ಆದರೆ, ೬೫ಸಾವಿರ ಜನರು ಮಾತ್ರ ನರೇಗಾ ಕೆಲಸದಲಿತೊಡಗಿದ್ದಾರೆ

ನಿಯಮದ ಪ್ರಕಾರ ಕೆಲಸಕ್ಕೆ ಜನರನ್ನು ಬಿಟ್ಟು ಯಂತ್ರೋಪಕರಣಗಳನ್ನು ಬಳಸುವಂತಿಲ್ಲ ಹೀಗಾಗಿ ಸಮಸ್ಯೆ ಎದುರಾಗಿದೆ ಎಂದು ನಗರ ಜಿಪಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೂ ನರೇಗಾದಿಂದ19 ಸಾವಿರ ರೂ.ನೀಡಲಾಗುತ್ತದೆ.

ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ, ಗೋಕಟ್ಟೆ ಹೂಳೆತ್ತುವುದು. ಕೊಳವೆ ಬಾವಿ, ಚೆಕ್ ಡ್ಯಾಂ ನಿರ್ಮಾಣ, ಹೊಲಗಳಿಗೆ ಹೋಗುವ ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಕೃಷಿ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನವನ, ಕಾಂಕ್ರಿಟ್ ರಸ್ತೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ವಯಸ್ಕ ಜನರಿಗೆ ಕನಿಷ್ಠ ೧೦೦ ದಿನಗಳ ಉದ್ಯೋಗ ಒದಗಿಸಿ ಕೂಲಿ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos