ಶಿರಾ: ಕೋವಿಡ್ ಹಿನ್ನೆಲೆಯಲ್ಲಿ ಹಮಾಲಿ ಕಾರ್ಮಿಕರ ನೆರವಿಗೆ ಬರುವಂತೆ ಸರ್ಕಾರವನ್ನು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯವಾಗಿದೆ ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್, ತಾಲ್ಲೂಕು ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಕೆಲಸ ನಿಲ್ಲಿಸಿ ಮುಷ್ಕರ ನಡೆಸಿದ ಹಮಾಲಿಗಳು ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಎಪಿಎಂಸಿ ಅಧ್ಯಕ್ಷರಿಗೆ ಸಲ್ಲಿಸುವ ಮೂಲಕ ಸರ್ಕಾರಕ್ಕೆ ತಮ್ಮ ಅಹವಾಲು ಮುಟ್ಟಿಸುವ ಯತ್ನ ನಡೆಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವನ್ನೇ ನಂಬಿಕೊಂಡಿರುವ ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್ ಗೋಡೌನ್, ವೇರ್ಹೌಸ್, ಗೂಡ್ಶೆಡ್, ಟ್ರಾನ್ಸ್ಪೋರ್ಟ್ ಮೊದಲಾದ ವಲಯದಲ್ಲಿ ಸುಮಾರು ೪ ಲಕ್ಷಕ್ಕೂ ಹೆಚ್ಚು ಜನರು ತತ್ತರಿಸುವಂತಾಗಿದೆ. ಇತ್ತೀಚೆಗೆ ಅನ್ಲಾಕ್ ಜಾರಿಯಾಗಿದ್ದರೂ, ಸರಿಯಾದ ವಹಿವಾಟು ಸಾಧ್ಯವಾಗದೇ, ಕೂಲಿ ದೊರೆಯದೇ ಜೀವನೋಪಾಯಕ್ಕೆ ಪರದಾಡುವಂತಾಗಿದೆ.